ಬೆಂಗಳೂರು: ಪಕ್ಷ ವಿರೋಧಿ ನಡವಳಿಕೆ ತೋರಿರುವ ಕೇರಳ ಜೆಡಿಎಸ್ ಶಾಸಕ ಸಿ.ಕೆ ನಾಣು ಅವರ ನೇತೃತ್ವದ ಜೆಡಿಎಸ್ ಘಟಕವನ್ನು ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ಸೋಮವಾರ ವಿಸರ್ಜಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ, ಪಕ್ಷದ ಸಂಘಟನಾತ್ಮಕ ಕಾರ್ಯಗಳ ಮೇಲುಸ್ತುವಾರಿ ವಹಿಸಲು ಮಧ್ಯಂತರ ರಾಜ್ಯ ಘಟಕ ರಚನೆ ಮಾಡಿರುವ ದೇವೇಗೌಡರು, ಈ ಕೂಡಲೇ ಜಾರಿಗೆ ಬರುವಂತೆ ಮಾಜಿ ಸಚಿವ ಮಾಥ್ಯು ಟಿ ಥಾಮಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಪಕ್ಷದ ಅಧ್ಯಕ್ಷರಾಗಿದ್ದ ಸಿ.ಕೆ ನಾಣು ಅವರು ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದರು. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ವಿವರಣೆ ಕೋರಿ ಪಕ್ಷವು ನೀಡಿದ ನೋಟಿಸ್ಗೆ ಸಿ.ಕೆ.ನಾಣು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ದೇವೇಗೌಡ ಹೇಳಿದ್ದಾರೆ.
ಸಿ.ಕೆ.ನಾಣು ಅವರು ಕೇರಳದ ಪ್ರಭಾವಿ ನಾಯಕರಾಗಿದ್ದಾರೆ. ಕೇರಳದ ಜೆಡಿಎಸ್ ಘಟಕವು ಎಲ್ಡಿಎಫ್ ಮೈತ್ರಿಕೂಟದಲ್ಲಿದ್ದು, ಪಿಣರಾಯಿ ವಿಜಯನ್ ಸರ್ಕಾರದ ಪಾಲುದಾರ ಪಕ್ಷವೂ ಹೌದು. ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಹೊಂದಿದೆ. ಚಿತ್ತೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕೆ. ಕೃಷ್ಣಮೂರ್ತಿ ಅವರು ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾರೆ.
ಸಿ.ಕೆ ನಾಣುಅವರನ್ನು ಕಳೆದ ವರ್ಷ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ವಡಗರ ಕ್ಷೇತ್ರದಿಂದ ಅವರು ವಿಧಾನಸಭೆಗೆ ಜೆಡಿಎಸ್ ಚಿಹ್ನೆಯಡಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.