ADVERTISEMENT

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇಕೆ? ಕಾರಣ ಬಿಚ್ಚಿಟ್ಟ ಜಿತಿನ್ ಪ್ರಸಾದ್

ಪಿಟಿಐ
Published 10 ಜೂನ್ 2021, 13:54 IST
Last Updated 10 ಜೂನ್ 2021, 13:54 IST
ಜಿತಿನ್ ಪ್ರಸಾದ್: ಪಿಟಿಐ ಚಿತ್ರ
ಜಿತಿನ್ ಪ್ರಸಾದ್: ಪಿಟಿಐ ಚಿತ್ರ   

ನವದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಒಂದು ದಿನದ ಬಳಿಕ ಪಕ್ಷ ತೊರೆದಿದ್ದಕ್ಕೆ ಕಾರಣ ಏನೆಂಬುದನ್ನು ಜಿತಿನ್ ಪ್ರಸಾದ್ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ತೊರೆದದ್ದು ಯಾವುದೇ ವ್ಯಕ್ತಿಯ ಅಥವಾ ಯಾವುದೇ ಹುದ್ದೆಯ ಆಸೆಯಿಂದಲ್ಲ. ಕಾಂಗ್ರೆಸ್ ಪಕ್ಷ ಮತ್ತು ಉತ್ತರ ಪ್ರದೇಶದ ಜನರ ನಡುವೆ ‘ಹೆಚ್ಚುತ್ತಿರುವ ಸಂಪರ್ಕ ಕಡಿತ’ದಿಂದಾಗಿ ಪಕ್ಷ ತೊರೆದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಜಿತಿನ್ ಕೆಲಸ ಮಾಡಿದ್ದರು. ಮೂರು ತಲೆಮಾರುಗಳಿಂದ ತಮ್ಮ ಕುಟುಂಬ ಸಂಬಂಧ ಹೊಂದಿದ್ದ ಕಾಂಗ್ರೆಸ್ ಪಕ್ಷ ತೊರೆದ ಪ್ರಸಾದ್, ಬುಧವಾರ ಬಿಜೆಪಿಗೆ ಸೇರಿಕೊಂಡರು. ಅದೇ ಸಂದರ್ಭ, ಬಿಜೆಪಿ ಮಾತ್ರ ‘ಏಕೈಕ ನಿಜವಾದ ರಾಷ್ಟ್ರೀಯ ಪಕ್ಷ’ ಎಂದು ಹೇಳಿದ್ದರು.

ಸಾಂಸ್ಥಿಕ ಕೂಲಂಕಷ ಪರಿಶೀಲನೆಗೆ ಕೋರಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಕಳೆದ ಅಕ್ಟೋಬರ್‌ನಲ್ಲಿ ಪತ್ರ ಬರೆದ 23 ಕಾಂಗ್ರೆಸ್ ನಾಯಕರ ಗುಂಪಿನಲ್ಲಿ ಒಬ್ಬರಾಗಿದ್ದ ಪ್ರಸಾದ್ ಅವರು ಪಕ್ಷ ಬಿಡಲು ಯಾವುದೇ ವ್ಯಕ್ತಿ ಕಾರಣರಲ್ಲ ಎಂದು ಹೇಳಿದ್ದಾರೆ.

ADVERTISEMENT

‘ನಾನು ಕಾಂಗ್ರೆಸ್ ತೊರೆದದ್ದು ಯಾವುದೇ ವ್ಯಕ್ತಿ ಅಥವಾ ಯಾವುದೇ ಹುದ್ದೆಗಾಗಿ ಅಲ್ಲ. ನಾನು ಕಾಂಗ್ರೆಸ್ ತೊರೆಯಲು ಕಾರಣ ಪಕ್ಷ ಮತ್ತು ಜನರ ನಡುವೆ ಸಂಪರ್ಕ ಕಡಿತವಾಗುತ್ತಿರುವುದು. ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಮತದ ಪಾಲು ಕುಗ್ಗುತ್ತಿದೆ. ಪಕ್ಷವನ್ನು ಪುನರುಜ್ಜೀವನಗೊಳಿಸುವ ಯಾವುದೇ ಯೋಜನೆ ಅಲ್ಲಿಇಲ್ಲ ಎಂದು ಪ್ರಸಾದ್ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಳ್ಳುವ ನಿರ್ಧಾರವನ್ನು ಚರ್ಚೆ ಮಾಡಿ ತೆಗೆದುಕೊಳ್ಳಲಾಗಿದೆ ಎಂದು ಒತ್ತಿಹೇಳಿದ ಅವರು, ತಮ್ಮ ಜನರಿಗೆ, ತಮ್ಮ ರಾಜ್ಯ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿದ್ದಾಗ ಜನರ ಹಿತಾಸಕ್ತಿಗಳನ್ನು ಕಾಪಾಡಲು ಸಾಧ್ಯವಾಗಲಿಲ್ಲ, ದೇಶದಲ್ಲಿರುವ ಏಕೈಕ ಸಾಂಸ್ಥಿಕ ರಾಷ್ಟ್ರೀಯ ಪಕ್ಷ ಬಿಜೆಪಿ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.