ಅಮರನಾಥ ಯಾತ್ರೆ
ಜಮ್ಮು: ಜಮ್ಮು ಮತ್ತು ಕಾಶ್ಮೀರದಾದ್ಯಂತ ಸುರಿದ ಭಾರಿ ಮಳೆಯಿಂದ ಬಹುತೇಕ ಎರಡು ದಿನ ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಶುಕ್ರವಾರ ಬೆಳಿಗ್ಗೆಯಿಂದ ಪುನರ್ ಆರಂಭವಾಗಿದೆ.
ಜಮ್ಮುವಿನ ನುನ್ವಾನ್ ಮತ್ತು ಬಾಲ್ಟಾಲ್ ಬೇಸ್ ಕ್ಯಾಂಪ್ಗಳಿಂದ ಯಾತ್ರಾರ್ಥಿಗಳು ಅಮರನಾಥ ದೇಗುಲದ ಕಡೆಗೆ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿ ಅಮರನಾಥ ದೇಗುಲದ ದರ್ಶನಕ್ಕೆ 6,064 ಯಾತ್ರಾರ್ಥಿಗಳ ತಂಡವು ಬುಧವಾರ ಪ್ರಯಾಣ ಆರಂಭಿಸಿತ್ತು. ಆದರೆ, ಬುಧವಾರ ಹಾಗೂ ಗುರುವಾರ ಸುರಿದ ಭಾರಿ ಮಳೆಯಿಂದ ಯಾತ್ರೆ ಸ್ಥಗೀತಗೊಂಡಿತ್ತು. ಮಳೆಯ ಪರಿಣಾಮ ಭೂಕುಸಿತಗಳು ಸಂಭವಿಸಿದ್ದವು. ಇದರಿಂದ 55 ವರ್ಷದ ಮಹಿಳೆ ಮೃತಪಟ್ಟಿದ್ದರು. ಮೂವರು ಗಾಯಗೊಂಡಿದ್ದರು.
6,064 ಯಾತ್ರಾರ್ಥಿಗಳ ಪೈಕಿ 1,511 ಮಂದಿ ಮಹಿಳೆಯರಿದ್ದಾರೆ. ಒಟ್ಟು ಯಾತ್ರಾರ್ಥಿಗಳಲ್ಲಿ 3,593 ಮಂದಿ 139 ವಾಹನಗಳಲ್ಲಿ ಪೆಹಲ್ಗಾಮ್ ಮಾರ್ಗವಾಗಿ ಪ್ರಯಾಣ ಆರಂಭಿಸಿದರೆ, 2471 ಮಂದಿ 95 ವಾಹನಗಳಲ್ಲಿ ಬಾಲ್ಟಾಲ್ ಮಾರ್ಗದ ಮೂಲಕ ತೆರಳಿದ್ದಾರೆ.
ಇದೇ ಜುಲೈ 3ರಂದು ಅಮರನಾಥ ಯಾತ್ರೆ ಪ್ರಾರಂಭವಾಗಿದ್ದು, ಆಗಸ್ಟ್ 9ಕ್ಕೆ ಯಾತ್ರೆ ಪೂರ್ಣಗೊಳ್ಳಲಿದೆ. ಈವರೆಗೆ 2.35 ಲಕ್ಷ ಮಂದಿ ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.