ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ, ಉದ್ಯಮ ಮತ್ತು ಇತರೆ ಕ್ಷೇತ್ರಗಳಿಗೆ ಚೇತರಿಕೆ ನೀಡಲು ₹ 1350 ಕೋಟಿ ಗಾತ್ರದ ಆರ್ಥಿಕ ಪ್ಯಾಕೇಜ್ ಅನ್ನು ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಘೋಷಿಸಿದರು. ‘ಇದು, ಆರಂಭ. ಮುಂದೆ ಇನ್ನಷ್ಟು ಕೊಡುಗೆ ನೀಡಲಾಗುವುದು’ ಎಂದು ಶನಿವಾರ ತಿಳಿಸಿದರು.
ಎರಡು ದಶಕಗಳಿಂದಲೂ ಈ ಭಾಗದಲ್ಲಿ ನೊಂದಿರುವ ಸಾಗಣೆದಾರರು, ಹೌಸ್ಬೋಟ್ ಮಾಲೀಕರು, ಶಿಖರ ವಾಲಾಗಳು ಮತ್ತು ಇತರರಿಗೆ ನೆರವಾಗುವಂತೆ ವ್ಯವಸ್ಥಿತವಾದ ಪ್ಯಾಕೇಜ್ ಅನ್ನೂ ರೂಪಿಸಲಾಗುತ್ತಿದೆ ಎಂದೂ ಸಿನ್ಹಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಘೋಷಿಸಿರುವ ₹ 1350 ಕೋಟಿ ಗಾತ್ರದ ಪ್ಯಾಕೇಜ್, ಆತ್ಮನಿರ್ಭರ ಅಭಿಯಾನದಡಿಘೋಷಿಸಲಾಗಿರುವ ₹ 14,000 ಕೋಟಿ ಪ್ಯಾಕೇಜ್ಗೆ ಹೊರತಾಗಿದೆ. ಉಳಿದಂತೆ, ಎಲ್ಲ ಸಾಲಗಳಿಗೆ ಮಾರ್ಚ್ 2021ರವರೆಗೂ ಸ್ಟಾಂಪ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ. ಉದ್ಯಮಿಗಳು, ಯುವಜನರಿಗೆ ನೆರವಾಗಲು ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಬ್ಯಾಂಕ್ಗಳಲ್ಲಿ ವಿಶೇಷ ಡೆಸ್ಕ್ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ವರ್ಷದ ಆಗಸ್ಟ್ನಲ್ಲಿ ಲೆಫ್ಟಿನಂಟ್ ಗವರ್ನರ್ ಆಗಿ ನೇಮಕಗೊಂಡಿರುವ ಅವರು, ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿ 15–20 ವರ್ಷಗಳಿಂದಲೂ ಉದ್ಯಮ ನಲುಗಿದೆ. ಉದ್ಯಮಕ್ಕೆ ಚೇತರಿಕೆ ನೀಡಲು ಶೀಘ್ರವೇ ನೂತನ ನೀತಿಯನ್ನು ಪ್ರಕಟಿಸಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.