ಶ್ರೀನಗರ:ಇಬ್ಬರು ಯೋಧರು, ತಮ್ಮ ಪಡೆಯ ಸೈನಿಕರು ಸಿಡಿಸಿದ ಗುಂಡೇಟುಗಳಿಂದ ಹತರಾಗಿದ್ದು, ಮತ್ತಿಬ್ಬರು ಯೋಧರು ಗಾಯಗೊಂಡ ಘಟನೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.
ಸುರಾನ್ಕೋಟೆ ಗಡಿಯಲ್ಲಿನ ಸೇನಾ ಶಿಬಿರದಲ್ಲಿ ಈ ಘಟನೆ ನಡೆದಿದೆ. ಗುಂಡಿನ ಚಕಮಕಿಯ ಹಿಂದಿನ ಕಾರಣ ಗೊತ್ತಾಗಿಲ್ಲ. ಗಾಯಾಳು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಸೇನಾ ಅಧಿಕಾರಿಯೊಬ್ಬರು ‘ಮೃತರು ಮತ್ತು ಗಾಯಾಳು ಯೋಧರು ಪ್ರಾದೇಶಿಕ ಸೇನೆಯವರು. ರಸ್ತೆ ಸಂಚಾರ ಮುಕ್ತಗೊಳಿಸುವ ಕಾರ್ಯಕ್ಕೆ ನಿಯೋಜಿಸಿದ್ದಾಗ ಈ ಘಟನೆ ನಡೆದಿದೆ’ ಎಂದು ತಿಳಿಸಿದ್ದಾರೆ.
ಸಂಘರ್ಷಪೀಡಿತವಲಯಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯಲ್ಲಿ ಆತ್ಮಹತ್ಯೆ, ಶಸ್ತ್ರತ್ಯಾಗ ಹಾಗೂ ಸ್ವಂತ ಪಡೆಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುವ ಮನೋಭಾವಕ್ಕೆ ಹಲವು ಕಾರಣಗಳಿರುತ್ತವೆ. ಇವುಗಳಲ್ಲಿ ಒತ್ತಡ, ಮನೆಗೆ ತೆರಳಲು ರಜೆ ಸಿಗದಿರುವುದು, ಮೇಲಧಿಕಾರಿಗಳೊಂದಿಗಿನ ಸಂವಹನ ಅಂತರವೂ ಕಾರಣ ಎನ್ನುವುದು ತಜ್ಞರ ಅಭಿಮತ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.