ಪುಣೆ: ‘ಇತ್ತೀಚಿನ ದಿನಗಳಲ್ಲಿ ಯುದ್ಧ ಸ್ವರೂಪಗಳು ಬದಲಾಗುತ್ತಿವೆ. ಹಾಗಾಗಿ ಮೂರು ರಕ್ಷಣಾ ಪಡೆಗಳು ಜಂಟಿಯಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ’ ಎಂದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಶನಿವಾರ ಹೇಳಿದರು.
ಪುಣೆಯ ಖಡಕ್ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್ಡಿಎ) 140ನೇ ತಂಡದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಇತ್ತೀಚಿನ ದಿನಗಳಲ್ಲಿ ಯುದ್ಧ ಸ್ವರೂಪಗಳು ಬದಲಾಗುತ್ತಿವೆ. ವಾಯು, ಜಲ, ಬಾಹ್ಯಾಕಾಶ, ಸೈಬರ್ ಕ್ಷೇತ್ರಗಳಲ್ಲೂ ವಿರೋಧಿಗಳನ್ನು ಎದುರಿಸಬೇಕಾಗಿದೆ. ಹಾಗಾಗಿ ಮೂರು ರಕ್ಷಣಾ ಪಡೆಗಳು ಒಟ್ಟಾಗಿ ಕಾರ್ಯನಿರ್ವಹಿಸುವುದು ಮೊದಲಿಗಿಂತ ಹೆಚ್ಚು ಅವಶ್ಯಕ’ ಎಂದರು.
‘ರಕ್ಷಣಾ ಕ್ಷೇತ್ರದಲ್ಲಿ ಅಪಾರ ಸುಧಾರಣೆಗಳಾಗುತ್ತಿವೆ. ಮಿಲಿಟರಿ ವ್ಯವಹಾರಗಳ ಇಲಾಖೆ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ನೇಮಕ ಸೇರಿದಂತೆ ಶಸ್ತ್ರಾಸ್ತ್ರ ಪಡೆಗಳಲ್ಲಿ ಹೊಸ ಸುಧಾರಣೆಗಳಾಗುತ್ತಿವೆ’ ಎಂದು ನೌಕಾಪಡೆಯ ಮುಖ್ಯಸ್ಥರು ತಿಳಿಸಿದರು.
‘ಮೂರು ಪಡೆಗಳ ಪದ್ಧತಿ, ಆಚರಣೆ, ಸಮವಸ್ತ್ರಗಳು ವಿಭಿನ್ನವಾಗಿರಬಹುದು. ಆದರೆ ಈಗಿನ ಯುದ್ಧ ಭೂಮಿಗಳನ್ನು ಮೂರು ಪಡೆಗಳು ಜಂಟಿಯಾಗಿ ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಬಹುದು’ ಎಂದು ಅವರು ಕೆಡೆಟ್ಗಳಿಗೆ ತಿಳಿಸಿದರು.
ಎನ್ಡಿಎನ 56ನೇ ಕೋರ್ಸ್ ಹಳೆಯ ವಿದ್ಯಾರ್ಥಿಯಾಗಿರುವ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಶುಕ್ರವಾರ ಅಕಾಡೆಮಿಗೆ ಆಗಮಿಸಿದ್ದರು. ಈ ವೇಳೆ ತಮ್ಮ ‘ಎಚ್’ ಸ್ಕ್ವಾಡರ್ನ್ ಕೆಡೆಟ್ಗಳೊಂದಿಗೆ ಜತೆ ಸಂವಾದ ನಡೆಸಿದರು. ಬಳಿಕ ಎನ್ಡಿಎ ಸಿಬ್ಬಂದಿಯೊಂದಿಗೆ ‘ಪುಶ್ ಅಪ್’ ಕೂಡ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.