ಲಖನೌ: ಬಿಜೆಪಿ ಮತ್ತು ಅದರ ಪೋಷಕ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್)ಗೆ ಸ್ವಾತಂತ್ರ್ಯ ಹೋರಾಟದ ವಿಚಾರವಾಗಿ ಮಾಡುವುದಕ್ಕೆ ಏನೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.
1925ರ ಕಾಕೋರಿ ರೈಲು ದರೋಡೆಯ ವಾರ್ಷಿಕೋತ್ಸವದ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಂಬಂಧಿಸಿ ಎಸ್ಪಿ ಮುಖ್ಯಸ್ಥ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವು ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರದ 'ಡೋಂಗಿತನ' ಎಂದು ಅಖಿಲೇಶ್ ಉಲ್ಲೇಖಿಸಿದ್ದಾರೆ.
1925, ಆಗಸ್ಟ್ 9ರಂದು ಬ್ರಿಟಿಷರ ವಿರುದ್ಧದ ದಂಗೆಯ ಭಾಗವಾಗಿ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳು ಉತ್ತರ ಪ್ರದೇಶದ ಕಾಕೋರಿ ಮೂಲಕ ಹಾದು ಹೋಗುವ ರೈಲಿನಲ್ಲಿ ಬ್ರಿಟಿಷ್ ಸರ್ಕಾರದ ನಿಧಿಯನ್ನು ದೋಚಿದ್ದರು.
ಆಗ್ರಾದಲ್ಲಿ ಭಾನುವಾರ ನಡೆದ ಕ್ರಾಂತಿ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಲು ಹೋಗಿದ್ದ ಹುತಾತ್ಮ ಸೈನಿಕನ ಪತ್ನಿಗೆ ಅವಮಾನ ಮಾಡಿ, ಹೊರಗೆ ಕಳುಹಿಸಲಾಗಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ.
ಹುತಾತ್ಮ ಯೋಧನ ಕುಟುಂಬಕ್ಕೆ ಘೋಷಣೆ ಮಾಡಿದ್ದ ಆಶ್ವಾಸನೆ ಈಡೇರಿಸುವಂತೆ ಕೋರಿ ಪತ್ನಿ ಮತ್ತು ಮಗ ಸಿಎಂ ಅವರನ್ನು ಭೇಟಿ ಮಾಡಲು ಪ್ರಯತ್ನಸಿದ್ದರು. ಆದರೆ ಅವರನ್ನು ಅವಮಾನಿಸಿ, ಹೊರಗೆ ಕಳುಹಿಸಲಾಗಿದೆ. ಇದು ದುಃಖಕರ ಘಟನೆ. ಬಿಜೆಪಿಯಲ್ಲಿರುವ ಜನರಿಗೆ ಹುತಾತ್ಮರನ್ನು ಗೌರವಿಸುವುದು ಹೇಗೆ ತಿಳಿದಿರಲು ಸಾದ್ಯ? ಬ್ರಿಟಿಷರಂತೆ ಬಿಜೆಪಿ ಸಮಾಜದ ಭಾವೈಕ್ಯತೆ ವಿರುದ್ಧ ಕೆಲಸ ಮಾಡುತ್ತಿದೆ. ಇದರ ಗುರಿಯೂ ಸಮಾಜವನ್ನು ಒಡೆಯುವುದಾಗಿದೆ. ಇದರ ಬಗ್ಗೆ ಜಾಗೃತರಾಗಬೇಕಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.