ಅಶೋಕ್ ಗೆಹಲೋತ್
ಜೈಪುರ: ನ್ಯಾಯಾಲಯದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಬೇಕು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಗುರುವಾರ ಹೇಳಿದ್ದಾರೆ.
ಮೂರು ವರ್ಷಗಳಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದ್ದು ಯಾವುದೇ ಪ್ರಗತಿ ಕಂಡುಬಂದಿಲ್ಲ, ಇದಕ್ಕೆ ಅಮಿತ್ ಶಾ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.
2022ರ ಜೂನ್ನಲ್ಲಿ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ವ್ಯಕ್ತಿಗಳು ಚೂರಿಯಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಅಶೋಕ ಗೆಹಲೋತ್ ಮುಖ್ಯಮಂತ್ರಿಯಾಗಿದ್ದರು.
ಘಟನೆ ನಡೆದ ನಾಲ್ಕು ಗಂಟೆಗಳ ಒಳಗೆ ರಾಜಸ್ಥಾನದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಎನ್ಐಎ ರಾತ್ರಿಯೇ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿತ್ತು. ಮೂರು ವರ್ಷಗಳು ಕಳೆದರೂ ಪ್ರಕರಣದ ಬಗ್ಗೆ ಯಾವುದೇ ಪ್ರಗತಿ ಸಾಧಿಸಲು ಎನ್ಐಎ ವಿಫಲವಾಗಿದೆ ಎಂದು ಅಶೋಕ್ ಗೆಹಲೋತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹಲವು ಪ್ರಕರಣಗಳಲ್ಲಿ ಕೆಲವೇ ತಿಂಗಳಲ್ಲಿ ನ್ಯಾಯಾಲಯಗಳು ತೀರ್ಪು ಪ್ರಕಟಿಸುತ್ತವೆ. ಆದರೆ ಈ ಪ್ರಕರಣ ಇನ್ನೂ ಬಾಕಿ ಇದೆ. ಸರ್ಕಾರದ ನಡೆಯ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳು ಹುಟ್ಟಿವೆ ಎಂದರು.
ನಾವು ಕನ್ಹಯ್ಯಾ ಲಾಲ್ ಅವರ ಇಬ್ಬರು ಮಕ್ಕಳಿಗೆ ಸರ್ಕಾರಿ ನೌಕರಿ ಸೇರಿದಂತೆ ₹ 50 ಲಕ್ಷ ಮೊತ್ತದ ಪರಿಹಾರ ಪ್ಯಾಕೇಜ್ ನೀಡಿದ್ದೇವೆ. ಸ್ವಾತಂತ್ರ್ಯದ ನಂತರ ನೀಡಿದ ಅತಿದೊಡ್ಡ ಪರಿಹಾರ ಪ್ಯಾಕೇಜ್ ಇದಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.