
ಕಾನ್ಪುರ: ಅಪಘಾತದಲ್ಲಿ ಆರು ಜನರು ಗಾಯಗೊಂಡ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಲ್ಯಾಂಬೋರ್ಗಿನಿ ಕಾರನ್ನು ₹8.30 ಕೋಟಿ ಭದ್ರತಾ ಬಾಂಡ್ ಇರಿಸಿಕೊಂಡು ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
ನ್ಯಾಯಾಲಯದ ಅನುಮತಿ ಪಡೆದು ಕಾರಿನ ಮಾಲೀಕರಿಗೆ ಶುಕ್ರವಾರ ರಾತ್ರಿ ಹಸ್ತಾಂತರಿಸಲಾಗಿದೆ ಎಂದು ಸರ್ಕಾರಿ ವಕೀಲರೊಬ್ಬರು ತಿಳಿಸಿದರು.
‘ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಸೂರಜ್ ಮಿಶ್ರಾ ಅವರು, ಉದ್ಯಮಿ ಕೆ.ಕೆ.ಮಿಶ್ರಾ ಅವರ ಪುತ್ರ ಶಿವಂ ಮಿಶ್ರಾ ಅವರ ಒಡೆತನದ ಐಷಾರಾಮಿ ಕಾರನ್ನು ಹಸ್ತಾಂತರಿಸಲು ಆದೇಶಿಸಿದ್ದಾರೆ. ಕಾರನ್ನು ಮಾರಾಟ ಮಾಡದಂತೆ, ವರ್ಗಾಯಿಸದಂತೆ ಹಾಗೂ ಬಣ್ಣ ಬದಲಾಯಿಸದಂತೆ ಸೂಚಿಸಿದ್ದಾರೆ’ ಎಂದು ಹೇಳಿದರು.
ಫೆಬ್ರುವರಿ 7ರಂದು ಶಿವಂ ಮಿಶ್ರಾ ಅವರು ಕಾನ್ಪುರದಲ್ಲಿ ಲ್ಯಾಂಬೋರ್ಗಿನಿ ಕಾರನ್ನು ವೇಗವಾಗಿ ಚಲಾಯಿಸಿ ಪಾದಚಾರಿಗಳಿಗೆ ಗುದ್ದಿದ್ದರು. ಪರಿಣಾಮವಾಗಿ ಆರು ಮಂದಿ ಗಾಯಗೊಂಡಿದ್ದರು. ಶಿವಂ ಮಿಶ್ರಾ ಅವರಿಗೆ ಜಾಮೀನು ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.