ADVERTISEMENT

ಕರ್ನಾಲ್‌ ಸಂಘರ್ಷ: ತನಿಖೆಗೆ ಆದೇಶಿಸಿದ ಸರ್ಕಾರ, ಪ್ರತಿಭಟನೆ ಅಂತ್ಯಗೊಳಿಸಿದ ರೈತರು

ಪಿಟಿಐ
Published 11 ಸೆಪ್ಟೆಂಬರ್ 2021, 9:03 IST
Last Updated 11 ಸೆಪ್ಟೆಂಬರ್ 2021, 9:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡಿಗಡ: ಕರ್ನಾ ಲ್‌ನಲ್ಲಿ ಆಗಸ್ಟ್‌ 28ರಂದು ರೈತರು ಮತ್ತು ಪೊಲೀಸರು ನಡುವೆ ನಡೆದ ಸಂಘರ್ಷದ ತನಿಖೆಗೆ ರಾಜ್ಯ ಸರ್ಕಾರ ಶನಿವಾರ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಲ್ ಜಿಲ್ಲಾಕೇಂದ್ರದ ಹೊರಗೆ ನಡೆಸುತ್ತಿದ್ದ ಪ್ರತಿಭಟನೆಯನ್ನು ರೈತರು ಅಂತ್ಯಗೊಳಿಸಿದ್ದಾರೆ.

‘ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯಲಿದೆ. ಒಂದು ತಿಂಗಳೊಳಗೆ ತನಿಖೆ ಪೂರ್ಣ ಗೊಳ್ಳಲಿದೆ. ಈ ಸಮಯದಲ್ಲಿ ಮಾಜಿ ಸಿಡಿಎಂ ಆಯುಷ್‌ ಸಿನ್ಹಾ ರಜೆಯಲ್ಲಿರುತ್ತಾರೆ‘ ಎಂದು ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದೇವೇಂದರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

‌ಸುದ್ದಿಗೋಷ್ಠಿಯಲ್ಲಿದ್ದ ರೈತ ನಾಯಕ ಗುರ್‌ನಾಮ್‌ ಸಿಂಗ್ ಚದೌನಿ ಅವರು, ‘ಜಿಲ್ಲಾ ಕೇಂದ್ರದ ಹೊರಗೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದೇವೆ‘ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಈ ವೇಳೆ ಪ್ರತಿಭಟನಾ ನಿರತರು, ‘ಪೊಲೀಸರು ಲಾಠಿಚಾರ್ಜ್‌ ಮಾಡಿದಾಗ ಇಬ್ಬರು ರೈತರು ಮೃತಪಟ್ಟಿದ್ದಾರೆ‘ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ದೇವೇಂದ್ರ ಸಿಂಗ್‌, ‘ಮೃತ ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು.

ಆಗಸ್ಟ್‌ 28ರಂದು ಬಿಜೆಪಿ ಕಾರ್ಯಕ್ರಮದ ಸ್ಥಳಕ್ಕೆ ರೈತರ ಮೆರವಣಿಗೆ ತೆರಳದಂತೆ ತಡೆಯಲು ಪೊಲೀಸರು ರೈತರ ಮಲೆ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ 10 ಪ್ರತಿಭಟನಕಾರರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ‘ಗಡಿ ದಾಟಿದರೆ ರೈತರ ತಲೆ ಒಡೆಯುವಂತೆ‘ ಐಎಎಸ್ ಅಧಿಕಾರಿ ಆಯುಷ್ ಸಿನ್ಹಾ ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆ ನೀಡಿದ್ದ ಐಎಎಸ್ ಅಧಿಕಾರಿ ಆಯುಷ್‌ ಸಿನ್ಹಾ ಅವರನ್ನು ಅಮಾನತುಗೊಳಿಸುವಂತೆ ಪ್ರತಿಭಟನಾ ನಿರತ ರೈತರು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.