ನವದೆಹಲಿ: ಕೋವಿಡ್–19 ರೋಗಿಗಳು ಐದು ದಿನ ಸಾಂಸ್ಥಿಕ ಕ್ವಾರಂಟೈನಲ್ಲಿರಬೇಕು ಎಂಬ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರ ಆದೇಶಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಭೆಯಲ್ಲಿ ಮಾತನಾಡಿದ ಅವರು, ‘ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಕೋವಿಡ್–19 ಸಂಬಂಧಿತ ದೇಶಕ್ಕೆ ಅನ್ವಯವಾಗುವ ನಿಯಮ ರೂಪಿಸಿದೆ. ರೋಗ ಲಕ್ಷಣರಹಿತ ಮತ್ತು ಕಡಿಮೆ ಸೋಂಕು ಲಕ್ಷಣ ಇರುವ ರೋಗಿಗಳು ಮನೆಯಲ್ಲೇ ಪ್ರತ್ಯೇಕವಾಗಿರಲು ಅನುಮತಿ ನೀಡಲಾಗಿದೆ. ಹೀಗಿರುವಾಗ ದೆಹಲಿಗೆ ಪ್ರತ್ಯೇಕ ನಿಯಮ ಮಾಡುವ ಅಗತ್ಯವೇನಿದೆ’ ಎಂದು ಪ್ರಶ್ನಿಸಿದ್ದಾರೆ.
‘ಬಹುತೇಕ ಸೋಂಕಿತರಿಗೆ ರೋಗಲಕ್ಷಣಗಳೇ ಇಲ್ಲ. ಅವರೆಲ್ಲರಿಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲು ಹೇಗೆ ಸಾಧ್ಯ. ರೈಲ್ವೆ ಬೋಗಿಯಐಸೋಲೇಷನ್ ವಾರ್ಡ್ನಲ್ಲಿ ಬಿಸಿಲಿನ ತಾಪ ಹೆಚ್ಚಿರುತ್ತದೆ. ಅದರಲ್ಲಿ ರೋಗಿಗಳು ಇರುವುದು ಕಷ್ಟವಾಗಲಿದೆ’ ಎಂದಿದ್ದಾರೆ.
ರೋಗಲಕ್ಷಣ ಇಲ್ಲದವರಿಗೆ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿರುವವರನ್ನು ಐದು ದಿನ ಸಾಂಸ್ಥಿಕ ಕ್ವಾರಂಟೈನಲ್ಲಿ ಇರಿಸಬೇಕು. ಐದು ದಿನಗಳ ನಂತರ ಮನೆಯಲ್ಲಿ ಅವರು ಪ್ರತ್ಯೇಕವಾಗಿರಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಕಳೆದ ಶುಕ್ರವಾರ ಆದೇಶಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.