ADVERTISEMENT

ಸಹಜ ಸ್ಥಿತಿಗೆ ಕೇರಳ: ಸಂತ್ರಸ್ತರು ನಿರಾಳ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2019, 19:45 IST
Last Updated 15 ಆಗಸ್ಟ್ 2019, 19:45 IST
ಮಸೀದಿಯಲ್ಲಿ ಮರಣೋತ್ತರ ಪರೀಕ್ಷಾ ಸೌಲಭ್ಯ ಕಲ್ಪಿಸಲಾಗಿದೆ
ಮಸೀದಿಯಲ್ಲಿ ಮರಣೋತ್ತರ ಪರೀಕ್ಷಾ ಸೌಲಭ್ಯ ಕಲ್ಪಿಸಲಾಗಿದೆ   

ತಿರುವನಂತಪುರ: ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲಿ ಗುರುವಾರ ಬಿಸಿಲು ಕಾಣಿಸಿಕೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ. ಸಂತ್ರಸ್ತರು ಪರಿಹಾರ ಶಿಬಿರಗಳಿಂದ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾರೆ.

ರಾಜ್ಯದಲ್ಲಿ ಮಳೆ ಸಂಬಂಧಿ ಅವಘ ಡಗಳಿಂದ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದ್ದು, 35 ಮಂದಿ ನಾಪತ್ತೆಯಾಗಿದ್ದಾರೆ.

ಮಳೆ ಪ್ರಮಾಣ ಕಡಿಮೆಯಾಗಿದ್ದು, 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್‌ ತೆಗೆಯಲಾಗಿದೆ. ಆದರೆ ಕಣ್ಣೂರು, ಕಾಸರಗೋಡು, ಇಡುಕ್ಕಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ಕವಳಪ್ಪಾರ ಹಾಗೂ ಪುತ್ತಮಲದಲ್ಲಿ
ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ. ಡ್ರೋನ್, ಶ್ವಾನದಳ ಹಾಗೂ ಆಧುನಿಕ ಉಪಕರಣಗಳನ್ನು ಬಳಸಲಾಗಿದೆ.

ಸಂತ್ರಸ್ತರು ವಾಪಸ್: ಪ್ರವಾಹ ಸಂತ್ರ ಸ್ತರು ನಿಧಾನವಾಗಿ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೂ 1,057 ಪರಿ ಹಾರ ಕೇಂದ್ರಗಳಲ್ಲಿ 1.75 ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ.

––––––

ಮಸೀದಿಯಲ್ಲಿ ಮರಣೋತ್ತರ ಪರೀಕ್ಷೆ

ತಿರುವನಂತಪುರ: ಕೇರಳದಲ್ಲಿ ಮಳೆ ಹಾಗೂ ಭೂಕುಸಿತದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲು ಮಸೀದಿಯ ಪ್ರಾರ್ಥನಾ ಕೊಠಡಿಯಲ್ಲಿ ಸ್ಥಳಾವಕಾಶ ನೀಡಲಾಗಿದೆ.

ಜಾತಿ, ಮತ ಭೇದವಿಲ್ಲದೇ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವ ಮೂಲಕ ಮಲಪ್ಪುರ ಜಿಲ್ಲೆಯ ನಿಲಂಬೂರು ಪೊತ್ತುಕಲ್ಲು ಎಂಬಲ್ಲಿ ಇರುವ ಮಸೀದಿ ಹೊಸ ಭಾಷ್ಯ ಬರೆದಿದೆ.

ಕವಳಪ್ಪಾರದಲ್ಲಿ ಆಗಸ್ಟ್ 8ರಂದು ನಡೆದ ಭೀಕರ ಭೂಕುಸಿತಕ್ಕೆ ತುತ್ತಾದವರ ಮೃತದೇಹಗಳು ಸಿಗುತ್ತಲೇ ಇವೆ. ತ್ವರಿತವಾಗಿ ಕಳೇಬರಗಳ ಮರಣೋತ್ತರ ಪರೀಕ್ಷೆ ನಡೆಸುವ ಅಗತ್ಯವಿದೆ. ಆದರೆ ಸರ್ಕಾರಿ ಆಸ್ಪತ್ರೆ 45 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಕವಳಪ್ಪಾರ ಸಮೀಪದಲ್ಲಿ ತಾತ್ಕಾಲಿಕ ಮರಣೋತ್ತರ ಪರೀಕ್ಷೆ ನಡೆಸಲು ಅನುಕೂವಾಗುವ ಸ್ಥಳಕ್ಕಾಗಿ ವೈದ್ಯಕೀಯ ತಂಡ ಹುಡುಕಾಟ ನಡೆಸುತ್ತಿತ್ತು.ಮಸೀದಿಯ ಪ್ರಾರ್ಥನಾ ಕೋಣೆಯನ್ನು ಇದಕ್ಕಾಗಿ ನೀಡಲು ಮಸೀದಿ ಅಧಿಕಾರಿಗಳು ಮುಂದೆ ಬಂದರು.

–––––

ಮಧ್ಯಪ್ರದೇಶದಲ್ಲಿ ನಿಲ್ಲದ ಮಳೆ

ಭೋಪಾಲ್: ಮಧ್ಯಪ್ರದೇಶದ ಬಹುತೇಕ ಭಾಗಗಳಲ್ಲಿ ಗುರುವಾರ ವ್ಯಾಪಕ ಮಳೆಯಾಗಿದ್ದು, ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಮಂದಸೌರ್, ರತಲಾಮ್, ನೀಮಚ್ ಸೇರಿದಂತೆ 18 ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನೀರಿನ ಮಟ್ಟ ಏರಿಕೆಯಾದ ಕಾರಣ ಹಲವು ಜಲಾಶಯಗಳಲ್ಲಿ ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗುತ್ತಿದೆ. ಇಂದಿರಾ ಸಾಗರ್ ಜಲಾಶಯದಲ್ಲಿ ನೀರಿನ ಮಟ್ಟ 260 ಮೀಟರ್‌ಗೆ ಏರಿಕೆಯಾಗಿದ್ದು, ತುಂಬಲು 1.73 ಮೀಟರ್ ಮಾತ್ರ ಬಾಕಿಯಿದೆ.

ಜಬಲ್ಪುರ, ಗ್ವಾಲಿಯರ್, ಚಂಬಾಲ್, ಉಜ್ಜೈನ್, ಇಂದೋರ್, ಭೋಪಾಲ್ ಜಿಲ್ಲೆಗಳಲ್ಲೂ ಮಳೆ ಎಚ್ಚರಿಕೆ ನೀಡಲಾಗಿದೆ.

––––

105 ಕೇರಳದಲ್ಲಿ ಮಳೆ ಅವಘಡಗಳಿಂದ ಮೃತಪಟ್ಟವರ ಸಂಖ್ಯೆ

243ಮಿ.ಮೀ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಪಠಾಣ್‌ನಲ್ಲಿ ಸುರಿದ ಮಳೆ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.