ADVERTISEMENT

ಎಕ್ಸಿಟ್ ಪೋಲ್:ಮಂಜೇಶ್ವರದಲ್ಲಿ ಯುಡಿಎಫ್;ವಟ್ಟಿಯೂರ್‌ಕಾವ್,ಆರೂರ್‌ಲ್ಲಿ ಎಲ್‌ಡಿಎಫ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 16:21 IST
Last Updated 21 ಅಕ್ಟೋಬರ್ 2019, 16:21 IST
ಕೇರಳದಲ್ಲಿ ಉಪಚುನಾವಣೆ
ಕೇರಳದಲ್ಲಿ ಉಪಚುನಾವಣೆ   

ಕಾಸರಗೋಡು: ಕೇರಳದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸೋಮವಾರ ಮತದಾನ ನಡೆದಿದ್ದು, ಮನೋರಮ ನ್ಯೂಸ್- ಕಾರ್ವಿ ಇನ್‌ಸೈಟ್ಸ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಮಂಜೇಶ್ವರದಲ್ಲಿ ಯುಡಿಎಫ್ ಗೆಲುವು ಸಾಧಿಸಲಿದೆ. ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಶೇ 36ರಷ್ಟು ಮತಗಳ ಮುನ್ನಡೆ ಸಾಧಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಎಲ್‌ಡಿಎಫ್ ಮತಗಳಿಕೆ ಇಲ್ಲಿ ಹೆಚ್ಚಾಗಲಿದ್ದು, ಬಿಜೆಪಿ ಮತಗಳು ಶೇ. 4.8ರಷ್ಟು ಕಡಿಮೆಯಾಗಲಿದೆ.

ಕೊನ್ನಿ ವಿಧಾನಸಭಾ ಕ್ಷೇತ್ರ
ಪತ್ತನಂತಿಟ್ಟ ಜಿಲ್ಲೆಯ ಕೊನ್ನಿ ವಿಧಾನಸಭಾ ಕ್ಷೇತ್ರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಲಿದೆ.ಇಲ್ಲಿ ಎಲ್‌ಡಿಎಫ್ ಶೇ. 46, ಯುಡಿಎಫ್ ಶೇ.41 ಮತ್ತು ಬಿಜೆಪಿ ಶೇ.12ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.

ಕೆ.ಯು. ಜನೀಶ್ ಕುಮಾರ್ ಇಲ್ಲಿ ಎಲ್‌ಡಿಎಫ್ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಸಮೀಕ್ಷೆ ಪ್ರಕಾರ ಯುಡಿಎಫ್ 2016ರಲ್ಲಿ ಗಳಿಸಿದ ಮತಗಳಿಗಿಂತ ಶೇ.9.99ರಷ್ಟು ಮತಗಳ ಹಿನ್ನಡೆ ಅನುಭವಿಸಲಿದೆ.ಅದೇ ವೇಳೆ ಎಲ್‌ಡಿಎಫ್ ಶೇ.9.55 ಮುನ್ನಡೆ ಸಾಧಿಸಲಿದೆ.ಬಿಜೆಪಿಯ ಮತ ಗಳಿಕೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ.

ADVERTISEMENT

ಆರೂರ್ ಚುನಾವಣಾ ಕ್ಷೇತ್ರ
ಎರ್ನಾಕುಳಂ ಜಿಲ್ಲೆಯ ಆರೂರ್ ಚುನಾವಣಾ ಕ್ಷೇತ್ರದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಸಮಬಲ ಸಾಧಿಸಲಿದೆ.ಎಲ್‌ಡಿಎಫ್ ಶೇ. 44, ಯುಡಿಎಫ್ 43, ಬಿಜೆಪಿ ಶೇ.11ರಷ್ಟು ಮತಗಳಿಸಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದೆ.

ಎರ್ನಾಕುಳಂಚುನಾವಣಾ ಕ್ಷೇತ್ರ
ಉಪಚುನಾವಣೆ ನಡೆದ ಎರ್ನಾಕುಳಂಚುನಾವಣಾ ಕ್ಷೇತ್ರದಲ್ಲಿ ಯುಡಿಎಫ್ ಮೇಲುಗೈ ಸಾಧಿಸಲಿದೆ.ಯುಡಿಎಫ್ ಶೇ. 55, ಎಲ್‌ಡಿಎಫ್- ಶೇ. 30 ಮತ್ತು ಬಿಜೆಪಿ ಶೇ.12ರಷ್ಟು ಮತಗಳನ್ನು ಗಳಿಸಲಿದೆ.

ವಟ್ಟಿಯೂರ್ ಕಾವ್ಚುನಾವಣಾ ಕ್ಷೇತ್ರ
ಇಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.ಯುಡಿಎಫ್ ಶೇ. 37 ಎಲ್‌ಡಿಎಫ್ ಶೇ. 36, ಮತ್ತು ಬಿಜೆಪಿ ಶೇ. 26ರಷ್ಟು ಮತಗಳಿಸಲಿದೆ.

ಮಾತೃಭೂಮಿ- ಜಿಯೊವೈಡ್ ಸಮೀಕ್ಷೆ
ಮಾತೃಭೂಮಿ- ಜಿಯೊವೈಡ್ ಸಮೀಕ್ಷೆ ಪ್ರಕಾರ ಮಂಜೇಶ್ವರ ಮತ್ತು ಎರ್ನಾಕುಳಂನಲ್ಲಿ ಯುಡಿಎಫ್ ಗೆಲುವು ಸಾಧಿಸಲಿದೆ. ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ ಶೇ.3ರಷ್ಟು ಹೆಚ್ಚು ಮತಗಳನ್ನು ಈ ಬಾರಿ ಗಳಿಸಲಿದ್ದಾರೆ.

ಖಮರುದ್ದೀನ್ ಅವರು ಶೇ. 40 ರಷ್ಟು ಮತಗಳಿಸಲಿದ್ದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಶೇ. 37ರಷ್ಟು ಮತಗಳಿಸಲಿದ್ದಾರೆ.ಸಿಪಿಎಂ ಅಭ್ಯರ್ಥಿ ಶಂಕರ ರೈ ಅವರಿಗೆ ಶೇ. 21ರಷ್ಟು ಮತ ಲಭಿಸಲಿದೆ. ಮುಸ್ಲಿಂ ಲೀಗ್ ಶಾಸಕರಾಗಿದ್ದ ಪಿ.ಬಿ ಅಬ್ದುಲ್ ರಜಾಕ್ ನಿಧನದಿಂದತೆರವಾಗಿದ್ದ ಸೀಟಿಗೆಇಲ್ಲಿ ಉಪಚುನಾವಣೆ ನಡೆದಿದೆ.

ವಟ್ಟಿಯೂರ್ ಕಾವ್
ಇಲ್ಲಿ ಈ ಬಾರಿ ಎಲ್‌ಡಿಎಫ್ ಅಭ್ಯರ್ಥಿ ವಿ.ಕೆ ಪ್ರಶಾಂತ್ ಗೆಲುವು ಸಾಧಿಸಲಿದ್ದು ಬಿಜೆಪಿಗೆ ಭಾರೀ ಹೊಡೆತ ಬೀಳಲಿದೆ.ವಿ.ಕೆ. ಪ್ರಶಾಂತ್‌ ಅವರಿಗೆ ಶೇ. 41 ಮತ ಲಭಿಸಲಿದ್ದು, ಯುಡಿಎಫ್ ಅಭ್ಯರ್ಥಿ ಕೆ. ಮೋಹನ್ ಕುಮಾರ್ ಶೇ. 37ರಷ್ಟು ಮತಗಳಿಸಲಿದ್ದಾರೆ.ಅದೇ ವೇಳೆ ಕಳೆದ ಎರಡು ಚುನಾವಣೆಗಳಲ್ಲಿ ಎರಡನೇ ಸ್ಥಾನದಲ್ಲಿದ್ದ ಬಿಜೆಪಿಗೆ ಇಲ್ಲಿ ಶೇ.20 ರಷ್ಟು ಮತಗಳು ಮಾತ್ರ ಲಭಿಸಲಿದೆ.

ಕೊನ್ನಿ
ಉಪಚುನಾವಣೆ ನಡೆದ ಕೊನ್ನಿ ಚುನಾವಣಾ ಕ್ಷೇತ್ರದಲ್ಲಿ ಯುಡಿಎಫ್ ವಿಜಯ ಸಾಧಿಸಲಿದೆ. ಅಡೂರ್ ಪ್ರಕಾಶ್ 23 ವರ್ಷ ಪ್ರತಿನಿಧಿಕರಿಸಿದ್ದ ಈ ಕ್ಷೇತ್ರದಲ್ಲಿ ಶೇ. 2ರಷ್ಟು ಮತಗಳ ಅಂತರದಲ್ಲಿ ಯುಡಿಎಫ್ ಗೆಲ್ಲಲಿದೆ. ಯುಡಿಎಫ್ ಅಭ್ಯರ್ಥಿ ಪಿ. ಮೋಹನ್ ರಾಜ್ ಶೇ. 41, ಎಲ್‌ಡಿಎಫ್ ಶೇ.39 ಮತಗಳಿಸಲಿದೆ. ಏತನ್ಮಧ್ಯೆ ಬಿಜೆಪಿಯ ಕೆ.ಸುರೇಂದ್ರನ್ ಅವರಿಗೆ ಇಲ್ಲಿ ಭಾರೀ ಹಿನ್ನಡೆಯಾಗಲಿದೆ.

ಆರೂರ್
ಇಲ್ಲಿ ಎಲ್‌ಡಿಎಫ್ ಗೆಲ್ಲಲಿದೆ. ಶೇ.1 ರಷ್ಟು ಮತಗಳ ಅಂತರದಲ್ಲಿ ಎಲ್‌ಡಿಎಫ್ ಇಲ್ಲಿ ವಿಜಯ ಪತಾಕೆ ಹಾರಿಸಲಿದೆ. ಎಲ್‌ಡಿಎಫ್ ಅಭ್ಯರ್ಥಿ ಮನು.ಸಿ.ಪುಳಿಕ್ಕಲ್ ಅವರಿಗೆ ಶೇ. 44 ಮತ ಲಭಿಸಲಿದೆ. ಯುಡಿಎಫ್ ಅಭ್ಯರ್ಥಿ ಶಾನಿಮೋಳ್ ಉಸ್ಮಾನ್ ಶೇ. 43 ಮತಗಳಿಸುವಾಗ ಬಿಜೆಪಿಗೆ ಶೇ. 11ರಷ್ಟು ಮತಗಳು ಲಭಿಸಲಿವೆ.

ಎರ್ನಾಕುಳಂ
ಡಿಸಿಸಿ ಅಧ್ಯಕ್ಷ ಮತ್ತು ಯುಡಿಎಫ್ ಅಭ್ಯರ್ಥಿಯಾಗಿರುವ ಟಿ.ಜೆ ವಿನೋದ್ ಶೇ. 5ರಷ್ಟು ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರ. ವಿನೋದ್ ಅವರು ಶೇ. 44 ಮತಗಳಿಸಲಿದ್ದು, ಎಲ್‌ಡಿಎಫ್ ಅಭ್ಯರ್ಥಿ ಶೇ.39 ಮತಗಳಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಇಲ್ಲಿ ಶೇ.15 ಮತಗಳು ಲಭಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.