ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕಾಯ್ದೆ ವಿರುದ್ಧ ಈಗಾಗಲೇ ಸುಪ್ರೀಂ ಕೋರ್ಟ್ಗೆ ಸುಮಾರು 60 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಿಎಎ ಪ್ರಶ್ನಿಸಿ ರಾಜ್ಯ ಸರ್ಕಾರವೊಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವುದು ಇದೇ ಮೊದಲು.
ಸಮಾನತೆಯ ಹಕ್ಕು ಸೇರಿದಂತೆ ಸಂವಿಧಾನದಲ್ಲಿರುವ ಅನೇಕ ಅಂಶಗಳನ್ನು ಸಿಎಎಯಲ್ಲಿ ಉಲ್ಲಂಘಿಸಲಾಗಿದೆ. ಈ ಕಾಯ್ದೆಯು ಸಂವಿಧಾನದ ಮೂಲತತ್ವವಾದ ಜಾತ್ಯತೀತತೆಗೆ ವಿರುದ್ಧವಾದದ್ದು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದೆ.
ಸಂವಿಧಾನದ ವಿಧಿ 14, 21 ಮತ್ತು 25 ಅನ್ನು ಸಿಎಎಯಲ್ಲಿ ಉಲ್ಲಂಘಿಸಲಾಗಿದೆ ಎಂದೂ ಕೇರಳ ಸರ್ಕಾರ ಹೇಳಿದೆ.
2015ರ ಮೊದಲು ಪಾಕಿಸ್ತಾನ, ಆಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರ ವಾಸವನ್ನು ಕ್ರಮಬದ್ಧಗೊಳಿಸುವುದಕ್ಕೆ ಸಂಬಂಧಿಸಿದ ‘ವಿದೇಶಿಗರ ತಿದ್ದುಪಡಿ ಆದೇಶ’ ಮತ್ತು ಪಾಸ್ಪೋರ್ಟ್ ನಿಯಮದಲ್ಲಿ ಮಾಡಲಾದ ತಿದ್ದುಪಡಿಯನ್ನೂ ಕೇರಳ ಸರ್ಕಾರ ಪ್ರಶ್ನಿಸಿದೆ.
ಸಿಎಎರದ್ದುಪಡಿಸಬೇಕೆಂದು ಆಗ್ರಹಿಸಿ ಕೇರಳ ವಿಧಾನಸಭೆಯಲ್ಲಿ ಇತ್ತೀಚೆಗೆ ಒಮ್ಮತದ ನಿರ್ಣಯ ಅಂಗೀಕರಿಸಲಾಗಿತ್ತು. ಅದಕ್ಕೆ ಬಿಜೆಪಿಯಿಂದ ಎದುರಾದ ವಿರೋಧವನ್ನೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದರು.
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.