ತಿರುವನಂತಪುರ: ಕೇರಳದಲ್ಲೀಗ ಕ್ರೈಸ್ತ ಮಹಿಳೆಯರನ್ನು ಲವ್ ಜಿಹಾದ್ ಮೂಲಕ ಆಮಿಷವೊಡ್ಡಿ, ಮತಾಂತರಗೊಳಿಸಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಸೇರಿಸಲಾಗುತ್ತಿದ್ದು, ಇದರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಕೇರಳದಿಂದ ಐಎಸ್ಗೆ ನೇಮಕಗೊಂಡ 21 ಮಂದಿಯಲ್ಲಿ ಅರ್ಧದಷ್ಟು ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರು ಎಂದು ಕಾರ್ಡಿನಲ್ ಜಾರ್ಜ್ ಅಲನ್ ಚೇರಿ ನೇತೃತ್ವದ ಸಿರೊ–ಮಲಬಾರ್ ಚರ್ಚ್ನ ವೇದಿಕೆಯುಹೇಳಿಕೆಯಲ್ಲಿ ತಿಳಿಸಿದೆ. ಇದು ಕೇರಳದ ಅತಿದೊಡ್ಡ ಕ್ರಿಶ್ಚಿಯನ್ ಘಟಕವಾಗಿದೆ.
ಕೇರಳದಲ್ಲಿ 'ಲವ್ ಜಿಹಾದ್' ಎಂಬುದು ಆತಂಕಕಾರಿಯಾಗಿ ಬೆಳೆಯುತ್ತಿದೆ ಮತ್ತು ಇದು ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಮೂರು ದಿನಗಳ ಸಭೆಯ ಬಳಿಕ ಚರ್ಚ್ನ ಸಿನೋಡ್ ಹೇಳಿಕೆ ನೀಡಿದೆ.
ಸಿನೋಡ್ ಎಂಬುದು ಎಲ್ಲ ಬಿಷಪ್ಪರನ್ನೊಳಗೊಂಡಿರುವ ಚರ್ಚ್ನ ಪರಮೋಚ್ಚ ಸಂಸ್ಥೆಯಾಗಿದೆ. ಇದೇ ವಿಷಯದಲ್ಲಿ ಕೇರಳದಲ್ಲಿ ಕ್ರಿಶ್ಚಿಯನ್ ಯುವತಿಯರನ್ನು ಹತ್ಯೆ ಮಾಡಲಾಗುತ್ತಿದೆ ಎಂದಿರುವ ಸಿನೋಡ್, ಈ ಬಗ್ಗೆ ಪೋಷಕರು ಮತ್ತು ಯುವತಿಯರಲ್ಲಿ ಜಾಗೃತಿ ಅಭಿಯಾನ ನಡೆಯಬೇಕಿದೆ ಎಂದು ಹೇಳಿದೆ.
ಆದರೆ, ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ಲಾಮಿಕ್ ಸಂಘಟನೆಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ), ಹಿಂದುತ್ವದ ಫ್ಯಾಸಿಸಂ ವಿರುದ್ಧ ಸಮಾಜದ ಎಲ್ಲ ವರ್ಗಗಳ ಏಕತೆ ಬೆಳೆಯುತ್ತಿರುವ ಈ ಹಂತದಲ್ಲಿ ಇಂತಹಾ ಆರೋಪಗಳು ವಿಭಜನೆಗೆ ಕಾರಣವಾಗಬಹುದು. ಚರ್ಚ್ ತನ್ನ ಹೇಳಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ. ಆದರೆ, ವಿಶ್ವ ಹಿಂದು ಪರಿಷತ್ ಚರ್ಚ್ ಹೇಳಿಕೆಯನ್ನು ಸ್ವಾಗತಿಸಿದ್ದು, ಕೇರಳದಲ್ಲಿ ಲವ್ ಜಿಹಾದ್ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.