ADVERTISEMENT

ಕೊರೊನಾದಿಂದ ದಂಪತಿ ಗುಣಮುಖ: ಸರ್ಕಾರಿ ವೈದ್ಯರು, ಶುಶ್ರೂಷಕರಿಂದ ಹೊಸ ಬದುಕು

ಪಿಟಿಐ
Published 29 ಮಾರ್ಚ್ 2020, 20:14 IST
Last Updated 29 ಮಾರ್ಚ್ 2020, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಕೊರೊನಾ ಸೋಂಕಿಗೆ ತುತ್ತಾಗಿ ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನಿಗಾ ಘಟಕ
ದಲ್ಲಿದ್ದ ಕೇರಳದ ದಂಪತಿ ಈಗ ಗುಣಮುಖರಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ದೊರೆತ ಚಿಕಿತ್ಸೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ದಂಪತಿ, ‘ಆಸ್ಪತ್ರೆಯ ವೈದ್ಯರು ಹಾಗೂ ಶುಶ್ರೂಷಕರು ನಮಗೆ ಹೊಸ ಬದುಕು ಕೊಟ್ಟಿದ್ದಾರೆ’ ಎಂದೂ ಹೇಳಿದ್ದಾರೆ.

ಲಾಕ್‌ಡೌನ್‌ ನಿಯಮಗಳ ಯಶಸ್ಸಿಗಾಗಿ ಎಲ್ಲರೂ ಒಗ್ಗೂಡಿ ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಸಹಕರಿಸಬೇಕಾಗಿದೆ ಎಂದು ಆಸ್ಪತ್ರೆಯಿಂದ ವಾಪಸಾದ ಕೊಟ್ಟಾಯಂ ಜಿಲ್ಲೆಯ ಚೆಂಗಳಂನ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆ ನಿಗಾ ಘಟಕದಲ್ಲಿ 21 ದಿನವಿದ್ದ ದಂಪತಿ ಮಾ. 25ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಇಟಲಿಯಿಂದ ಬಂದಿದ್ದ ಪತ್ನಿಯ ಪೋಷಕರಿಂದ ಇವರಿಗೆ ಸೋಂಕು ಹರಡಿತ್ತು.

‘ಸರ್ಕಾರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನೀಡುವ ಪ್ರತಿ ಸಲಹೆಯನ್ನು ಪಾಲಿಸಿ. ಸೋಂಕು ಹರಡುವುದನ್ನು ತಡೆಯಲು ಸಿಬ್ಬಂದಿ ದಿನವಿಡೀ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಕೋವಿಡ್‌ ಸೋಂಕು ಅಷ್ಟು ಅಪಾಯಕಾರಿ ಎಂದು ಅನ್ನಿಸುವುದಿಲ್ಲ. ಆದರೆ ಮಾಧ್ಯಮಗಳ ವರದಿಗಳಿಂದಾಗಿ ನಮಗೂ ಆರಂಭದಲ್ಲಿ ಭಯವಾಗಿತ್ತು. ಆದರೆ, ವೈದ್ಯರು, ಶುಶ್ರೂಷಕರ ನೆರವಿನಿಂದ ನಾವು ಈ ಮಾನಸಿಕ ಆಘಾತದಿಂದ ಹೊರಬಂದೆವು.

‘21 ದಿನಗಳ ದೀರ್ಘವಾಸ ಸರ್ಕಾರಿ ಆಸ್ಪತ್ರೆ ಕುರಿತಂತೆ ನನ್ನ ನಿಲುವನ್ನೇ ಬದಲಿಸಿದೆ’ ಎಂದು ಅವರು ಹೇಳಿದರು.

‘ನಮ್ಮಿಂದಾಗಿ ಸ್ನೇಹಿತರು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಸೋಂಕು ಹರಡಿಲ್ಲ ಎಂಬುದೇ ನಮಗೆ ಸಮಾಧಾನದ ಸಂಗತಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.