ಕೊಲ್ಲಂ: ಹಾವು ಕಚ್ಚಿ ಪತ್ನಿ ಮೃತಪಟ್ಟ ಪ್ರಕರಣದಲ್ಲಿ ಪತಿಯೇ ದೋಷಿ ಎಂದು ಕೇರಳದ ಕೊಲ್ಲಂನ ನ್ಯಾಯಾಲಯವು ತೀರ್ಪು ನೀಡಿರುವ ಅಪರೂಪದ ಪ್ರಕರಣ ವರದಿಯಾಗಿದೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಪತ್ನಿ ಉತ್ತರ ಮಲಗಿದ್ದ ಕೊಠಡಿಗೆ ನಾಗರಹಾವು ಬಿಟ್ಟು, ಆಕೆಗೆ ಕಚ್ಚುವಂತೆ ಮಾಡಿ ಸಾವಿಗೆ ಕಾರಣವಾದ ಪತಿ 25 ವರ್ಷದ ಸೂರಜ್ ದೋಷಿ ಎಂದು ನ್ಯಾಯಾಲಯ ಹೇಳಿದೆ.
ಬುಧವಾರ ಸೂರಜ್ಗೆ ಶಿಕ್ಷೆ ಪ್ರಕಟಿಸಲಾಗುವುದು ಎಂದು ಕೊಲ್ಲಂನ ಆರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್, ಸಾಂದರ್ಭಿಕ ಸಾಕ್ಷ್ಯದ ಆಧಾರದಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲಾಗಿರುವ ಅಪರೂಪದ ಪ್ರಕರಣವಾಗಿದೆ. ಪೊಲೀಸ್ ತಂಡದ ತನಿಖೆಯನ್ನು ಶ್ಲಾಘಿಸುತ್ತಾ, ವೈಜ್ಞಾನಿಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ಮಾಡುವುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಈ ಕೊಲೆ ಪ್ರಕರಣವು ಅತ್ಯಂತ ಕಷ್ಟಕರವಾಗಿತ್ತು. ತನಿಖಾ ತಂಡವು ವಿಧಿವಿಜ್ಞಾನ ಪರೀಕ್ಷೆ, ಫೈಬರ್ ಡೇಟಾ ಮತ್ತು ಹಾವಿನ ಡಿಎನ್ಎ ಪರೀಕ್ಷೆ ಸೇರಿ ಮುಂತಾದ ಸಾಂದರ್ಭಿಕ ಸಕ್ಷಿಗಳನ್ನು ಕಲೆ ಹಾಕಿ ಪ್ರಕರಣ ಭೇದಿಸಲು ತುಂಬಾ ಶ್ರಮಿಸಿದೆ ಎಂದು ಅವರು ತಿರುವನಂತಪುರಂನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.