ಮಲ್ಲಪುರಂ(ಕೇರಳ): ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದ ಕೇರಳದಲ್ಲೀಗ ಹಕ್ಕಿ ಜ್ವರ ಅಲ್ಲಿನ ಜನರನ್ನು ತಲ್ಲಣಗೊಳಿಸಿದ್ದು, ಸರ್ಕಾರ ಹಕ್ಕಿಜ್ವರ ಕಾಣಿಸಿಕೊಂಡ ಸ್ಥಳದ 1ಕಿಲೋ ಮೀಟರ್ಸುತ್ತಮುತ್ತಲಿನ ಕೋಳಿಫಾರಂ, ಕೋಳಿ ಮೊಟ್ಟೆ, ಪಾರಿವಾಳ ಸೇರಿದಂತೆ ಇತರೆ ಪಕ್ಷಿಗಳನ್ನು ತೆರವುಗೊಳಿಸಬೇಕೆಂದು ಆದೇಶ ಹೊರಡಿಸಿದೆ.
ಮಲ್ಲಪುರಂನ ಪರಪ್ಪನಂಗಡಿ ಸುತ್ತಮುತ್ತ ಎರಡು ಹಕ್ಕಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಈ ಕಾರಣದಿಂದಾಗಿ ಈ ಪ್ರದೇಶದ ಸುತ್ತಮುತ್ತಲಿನ ಕೋಳಿಫಾರಂಗಳಲ್ಲಿದ್ದ ಕೋಳಿಗಳನ್ನು ನಾಶಪಡಿಸಲಾಗಿದೆ.
ಸ್ಥಳೀಯ ಆರೋಗ್ಯಾಧಿಕಾರಿಗಳು 10 ತಂಡಗಳನ್ನು ತೆರವುಗೊಳಿಸುವ ಕಾರ್ಯಕ್ಕಾಗಿ ನಿಯೋಜಿಸಿದೆ. ಈ ತಂಡಗಳು ಎಲ್ಲಾ ಕೋಳಿಫಾರಂಗಳನ್ನು ತಪಾಸಣೆ ಮಾಡಿ ಕೋಳಿಗಳು, ಮೊಟ್ಟೆಗಳು, ನಾಟಿ ಕೋಳಿಗಳು, ಪಾರಿವಾಳಗಳನ್ನು ಪತ್ತೆ ಹಚ್ಚಿ ಅವುಗಳ ಗೂಡುಗಳನ್ನೂ ನಾಶಪಡಿಸುತ್ತಿದ್ದಾರೆ.
ಕೇರಳ ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಎಲ್ಲೆಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆಯೋ ಆ ಪ್ರದೇಶಗಳ ಸುತ್ತಮುತ್ತಲಿನ ಕೋಳಿಫಾರಂಗಳನ್ನು ನಾಶಪಡಿಸಲಾಗುತ್ತಿದೆ.ಕರ್ನಾಟಕ-ಕೇರಳ ಗಡಿಭಾಗವಾದ ಮೈಸೂರು, ಮಡಿಕೇರಿ, ಕಾಸರಗೋಡು ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ.
ಹಕ್ಕಿಜ್ವರ ಭೀತಿಯಿಂದ ಜನರು ಚಿಕನ್ ತಿನ್ನುವುದನ್ನು ಕಡಿಮೆ ಮಾಡಿರುವ ಕಾರಣ ಕರ್ನಾಟಕದಲ್ಲಿ ಕೋಳಿ ದರ ತೀರ ಕಡಿಮೆಯಾಗಿದೆ. ಇದರಿಂದಾಗಿ ಕೋಳಿ ಸಾಕಾಣಿಕೆದಾರರು ನಷ್ಟ ಅನುಭವಿಸುತ್ತಿದ್ದು, ರಾಜ್ಯದ ಕೋಳಿಸಾಕಾಣಿಕೆದಾರನೊಬ್ಬ ನಷ್ಟ ಅನುಭವಿಸಿದ ಕಾರಣ ಕೋಳಿಗಳನ್ನು ಗುಂಡಿ ತೆಗೆದು ಹೂತು ಹಾಕಿರುವ ವಿಡಿಯೋ ವೈರಲ್ ಆಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.