ತಿರುವನಂತಪುರಂ: ವರದಕ್ಷಿಣೆ ಪದ್ಧತಿಯ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಲು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗಾಣಿಸುವ ಉದ್ದೇಶದೊಂದಿಗೆ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಇಲ್ಲಿನ ರಾಜಭವನದ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಬೆಳಿಗ್ಗೆಯಿಂದ ಒಂದು ದಿನದ ಉಪವಾಸ ಆರಂಭಿಸಿದರು.
ಗಾಂಧಿ ಸ್ಮಾರಕ ನಿಧಿ ಮತ್ತಿತರ ಸಂಘಟನೆಗಳ ಸಹಯೋಗದವರು ಕರೆ ನೀಡಿದ್ದ ವರದಕ್ಷಿಣೆ ಪದ್ಧತಿ ವಿರುದ್ಧದ ಸಾಮಾಜಿಕ ಜಾಗೃತಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಅವರು ಈ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.
ಬೆಳಿಗ್ಗೆ 8 ಗಂಟೆಯಿಂದ ರಾಜ್ಯಪಾಲರು ಉಪವಾಸ ಆರಂಭಿಸಿದ್ದು, ಸಂಜೆ 6ರವರೆಗೆ ಮುಂದುವರಿಸುತ್ತಾರೆ. ಈ ಉಪವಾಸ ದಿನದ ಭಾಗವಾಗಿ ಗಾಂಧಿ ಸ್ಮಾರಕ ನಿಧಿ ಮತ್ತಿತರರ ಸಂಘಟನೆಗಳು ಸಂಜೆ ಗಾಂಧಿಭವನದಲ್ಲಿ ಆಯೋಜಿಸಿರುವ ಪ್ರಾರ್ಥನಾ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇದೇ ವೇಳೆ ಗಾಂಧಿ ಭವನದಲ್ಲೂ ಕೆಲವೊಂದು ಗಾಂಧಿ ಅನುಯಾಯಿ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದ ಉಪವಾಸ ಆರಂಭಿಸಿದ್ದಾರೆ.
ಮಂಗಳವಾರ ಸಂಜೆ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ರಾಜ್ಯಪಾಲ ಖಾನ್ ಅವರು, ’ವರದಕ್ಷಿಣೆ ಎಂಬುದು ಕೇರಳ ರಾಜ್ಯದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಮಹಿಳೆಯರ ಘನತೆಗೆ ಮಾಡುತ್ತಿರುವ ಗಂಭೀರ ಅನ್ಯಾಯ ಮತ್ತು ಅವಮಾನ’ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.