
ಪ್ರಾತಿನಿದಿಕ ಚಿತ್ರ
ಕೊಲ್ಲಮ್: ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿ ಪತ್ನಿಯ ಮೇಲೆ ವ್ಯಕ್ತಿಯೊಬ್ಬ ಬಿಸಿ ಸಾಂಬಾರ್ ಸುರಿದಿರುವ ಘಟನೆ ನಡೆದಿದೆ.
ಚಡಯಮಂಗಲಂ ಸಮೀಪದ ವೈಕ್ಕಲ್ನ ರೆಜಿಲಾ ಗಫೂರ್ (36) ಗಾಯಗೊಂಡ ಮಹಿಳೆ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪತಿ ಸಜೀರ್ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸಜೀರ್, ಪತ್ನಿಯ ಬಳಿ ತಲೆಕೂದಲು ಹರಡಿಕೊಂಡು ತನ್ನ ಎದುರು ಕುಳಿತುಕೊಳ್ಳುವಂತೆ ಹೇಳಿದ್ದಾನೆ. ನಂತರ ಬೂದಿ ಹಚ್ಚಿಕೊಳ್ಳುವಂತೆ ಹೇಳಿ, ಮಾಂತ್ರಿಕನೊಬ್ಬ ನೀಡಿದ್ದ ಲಾಕೆಟ್ ಒಂದನ್ನು ಕಟ್ಟಿಕೊಳ್ಳುವಂತೆ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪಿಕೊಳ್ಳದ ಕಾರಣ ಅಡುಗೆ ಮನೆಯಲ್ಲಿದ್ದ ಬಿಸಿ ಸಾಂಬಾರ್ ತಂದು ಮುಖದ ಮೇಲೆ ಸುರಿದಿದ್ದಾನೆ.
ಮಹಿಳೆಯ ಕಿರುಚಾಟ ಕೇಳಿ ಅಕ್ಕಪಕ್ಕದವರು ಬಂದು ನೋಡಿದಾಗ, ಆಕೆಯ ಸ್ಥಿತಿಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತನ್ನ ಪತ್ನಿಗೆ ದೆವ್ವ ಹಿಡಿದಿದೆ ಎಂದು ಸಜೀರ್, ಈ ಹಿಂದೆ ಹಲವಾರು ಬಾರಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಮಾಂತ್ರಿಕನನ್ನು ಭೇಟಿಯಾಗಿ ಸಲಹೆ ಕೇಳಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆತನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.