ತಿರುವನಂತಪುರ: ವಿದೇಶದಿಂದ ಬಂದ ಬಳಿಕ ಪ್ರತ್ಯೇಕವಾಗಿ ಉಳಿಯಬೇಕು ಎಂಬ ನಿಯಮವನ್ನು ಕೊರೊನಾ ವೈರಸ್ ಸೋಂಕು ಪೀಡಿತ ವ್ಯಕ್ತಿಯೊಬ್ಬರು ಉಲ್ಲಂಘಿಸಿದ್ದರಿಂದ ಕೇರಳದಲ್ಲಿ 300 ಜನರಿಗೆ ಸೋಂಕು ಭೀತಿ ಎದುರಾಗಿದೆ. ಇವರೆಲ್ಲ ಈಗ ಕ್ವಾರಂಟೈನ್ನಲ್ಲಿ ಉಳಿಯುವಂತಾಗಿದೆ.
ಪಾಲಕ್ಕಾಡ್ ಜಿಲ್ಲೆಯ ವ್ಯಕ್ತಿ ಉಮ್ರಾ ಯಾತ್ರೆ ಮುಗಿಸಿ ಮಾರ್ಚ್ 13ರಂದು ಮರಳಿದ್ದರು. ಪ್ರತ್ಯೇಕವಾಗಿ ಇರಬೇಕೆಂಬ ನಿಮಯ ಉಲ್ಲಂಘಿಸಿ ಪುತ್ರನ ಸಂಪರ್ಕಕ್ಕೆ ಬಂದಿದ್ದಾರೆ. ಅವರ ಪುತ್ರ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿನಲ್ಲಿ ನಿರ್ವಾಹಕರಾಗಿದ್ದಾರೆ. ಈ ಬಸ್ಸು ಕೊಚ್ಚಿ, ತಿರುವನಂತಪುರ ಸೇರಿದಂತೆ ಐದು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ ಎಂದು ಜಿಲ್ಲಾಧಿಕಾರಿ ಡಿ. ಬಾಲಮುರಳಿ ತಿಳಿಸಿದ್ದಾರೆ.
ಈ ವ್ಯಕ್ತಿಗೆ ಕೋವಿಡ್–19 ತಗುಲಿರುವುದು ಬುಧವಾರ ದೃಢಪಟ್ಟಿತ್ತು.
ಕಾಸರಗೋಡು ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿಯೂ ಇತ್ತೀಚೆಗೆ ಇಂತಹದ್ದೇ ಸಮಸ್ಯೆ ಸೃಷ್ಟಿಯಾಗಿತ್ತು.
ಸೋಂಕು ಪೀಡಿತ ವ್ಯಕ್ತಿ ಪಾಲಕ್ಕಾಡ್ ಸಮೀಪದ ಕರಕ್ಕುರುಸ್ಸಿಯವರಾಗಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಇವರು ಮಸೀದಿಯಲ್ಲಿ ಪ್ರಾರ್ಥನೆಗೂ ತೆರಳಿದ್ದರು. ಅನೇಕ ಅಂಗಡಿಗಳಿಗೆ, ಸ್ಥಳೀಯ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಿದ್ದರು ಎನ್ನಲಾಗಿದೆ. ಇವರ ಬಗ್ಗೆ ಸ್ಥಳೀಯರು ಆರೋಗ್ಯ ಅಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ಬಳಿಕ ಇವರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.