ADVERTISEMENT

ಮಾವೋವಾದಿ ನಾಯಕನನ್ನು ಬಂಧಿಸಿ ಎನ್‌ಐಎ ವಶಕ್ಕೆ ನೀಡಿದ ಕೇರಳ ಪೊಲೀಸರು

ಪಿಟಿಐ
Published 7 ನವೆಂಬರ್ 2021, 11:35 IST
Last Updated 7 ನವೆಂಬರ್ 2021, 11:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ತಿರುವನಂತಪುರಂ: ಕಣ್ಣೂರು ಜಿಲ್ಲೆಯ ವಲಪಟ್ಟಣಂನಲ್ಲಿ ಇತರ ಇಬ್ಬರೊಂದಿಗೆ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮಾವೋವಾದಿ ನಾಯಕನನ್ನು ಭಾನುವಾರ ಬಂಧಿಸಿರುವ ಕೇರಳ ಪೊಲೀಸರು, ಬಂಧಿತರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತರನ್ನು ರಾಘವೇಂದ್ರ, ಗೌತಮ್ ಮತ್ತು ಮುರುಕೇಶನ್ ಎಂದು ಗುರುತಿಸಲಾಗಿದ್ದು, 2016ರಲ್ಲಿ ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಅರಣ್ಯದಲ್ಲಿ ಮಾವೋವಾದಿಗಳು ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿದ್ದ ಪ್ರಕರಣದಲ್ಲಿ ಇವರು ಪೊಲೀಸರಿಗೆ ಬೇಕಾಗಿದ್ದರು.

ನಿಯಮಿತ ತಪಾಸಣೆಯ ಭಾಗವಾಗಿ ವಾಹನವನ್ನು ತಡೆದಿರುವುದಾಗಿ ಮತ್ತು ತಪಾಸಣೆ ಪ್ರಾರಂಭವಾದ ತಕ್ಷಣ, ಮಾವೋವಾದಿ ನಾಯಕ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಕಣ್ಣೂರು ನಗರ ಪೊಲೀಸ್ ಕಮಿಷನರ್ ಆರ್. ಇಳಂಗೊ, ಮಾವೋವಾದಿ ನಾಯಕ ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಬಳಿಕ ನಾವು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಆತ ತಮಿಳುನಾಡು ಮೂಲದ ರಾಘವೇಂದ್ರ ಆಗಿದ್ದು, ಆತನ ಬಳಿ ಎರಡು ಆಧಾರ್ ಕಾರ್ಡ್‌ಗಳಿವೆ. ಈತ ಎನ್‌ಐಎಗೆ ಬೇಕಾಗಿರುವ ವ್ಯಕ್ತಿ ಎಂಬುದು ವಿಚಾರಣೆಯಲ್ಲಿ ತಿಳಿದಿದೆ. ತಕ್ಷಣ ನಾವು ಎನ್‌ಐಎಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ತನಿಖಾ ತಂಡವು ಅವರನ್ನು ತಮ್ಮ ವಶಕ್ಕೆ ಪಡೆದಿದೆ' ಎಂದು ಹೇಳಿದರು.

ಕಣ್ಣೂರಿನಲ್ಲಿ ಏಕೆ ಇದ್ದಾನೆ ಮತ್ತು ಆತನ ಹಿಂದಿನ ಚಟುವಟಿಕೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಮಾವೋವಾದಿ ನಾಯಕ ಬಹಿರಂಗಪಡಿಸಿಲ್ಲ ಎಂದು ಇಳಂಗೊ ಹೇಳಿದ್ದಾರೆ.

ಕಾಡಿನಲ್ಲಿ ಮಾವೋವಾದಿಗಳ ಧ್ವಜ ಹಾರಿಸಿದ ಪ್ರಕರಣದಲ್ಲಿ ಮತ್ತು ಶಸ್ತ್ರಾಸ್ತ್ರ ತರಬೇತಿಗೆ ಸಂಬಂಧಿಸಿದಂತೆ ಎನ್‌ಐಎ ಆರೋಪಿಸಿರುವ 19 ಮಾವೋವಾದಿ ಕಾರ್ಯಕರ್ತರಲ್ಲಿ ಈತನೂ ಒಬ್ಬನಾಗಿದ್ದ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.