ತಿರುವನಂತಪುರ: ಓಣಂ ಹಬ್ಬದ ಪ್ರಯುಕ್ತ ಹೆಚ್ಚುವರಿ ಅಕ್ಕಿ ಹಂಚಿಕೆ ಮಾಡಬೇಕೆಂಬ ರಾಜ್ಯದ ಬೇಡಿಕೆಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ಕೇರಳ ವಿರೋಧಿ ನಿಲುವನ್ನು ಮುಂದುವರಿಸಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕೇಂದ್ರದ ಕೇರಳ ವಿರೋಧಿ ನಿಲುವಿನ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಪ್ರತಿಭಟಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು, ‘ಆದ್ಯತೆಯೇತರ ಕುಟುಂಬಗಳ ಪ್ರತಿ ಪಡಿತರ ಚೀಟಿಗೆ ಹೆಚ್ಚುವರಿಯಾಗಿ ತಲಾ ಐದು ಕೆ.ಜಿ. ಅಕ್ಕಿಯನ್ನು ಪ್ರಸ್ತುತ ರಾಜ್ಯಕ್ಕೆ ನೀಡಲಾಗುತ್ತಿರುವ ₹8.30 ದರದಲ್ಲೇ ನೀಡಬೇಕು ಮತ್ತು ಎರಡು ವರ್ಷಗಳ ಹಿಂದಿನವರೆಗೂ ನೀಡಲಾಗುತ್ತಿದ್ದ ಗೋಧಿ ಹಂಚಿಕೆಯನ್ನು ಪುನರಾರಂಭಿಸಬೇಕು ಎಂಬುದಾಗಿ ರಾಜ್ಯ ಒತ್ತಾಯಿಸಿದೆ’ ಎಂದು ಅವರು ಹೇಳಿದ್ದಾರೆ.
ಓಣಂನಂತಹ ವಿಶೇಷ ಸಂದರ್ಭಗಳಲ್ಲಿ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಗಗನಕ್ಕೇರುವುದನ್ನು ತಡೆಯಲು, ಸಾಧ್ಯವಾದಷ್ಟೂ ಆದ್ಯತೆಯೇತರ ವಿಭಾಗಗಳಿಗೆ ಆಹಾರ ಧಾನ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ ಎಂದು ಅವರು ಹೇಳಿದ್ದಾರೆ.
‘ಹಾಗಾಗಿ ರಾಜ್ಯವು ಆದ್ಯತೆಯೇತರ ಕುಟುಂಬಗಳಿಗೆ ಹೆಚ್ಚುವರಿ ಅಕ್ಕಿ ಹಂಚಿಕೆಯನ್ನು ನೀಡುವಂತೆ ಒತ್ತಾಯಿಸಿತು’ ಎಂದು ಪಿಣರಾಯಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.