ADVERTISEMENT

ಸಿಲ್ವರ್‌ಲೈನ್‌ ರೈಲು ಯೋಜನೆ ಕೈಬಿಟ್ಟ ಕೇರಳ ಸರ್ಕಾರ?

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:36 IST
Last Updated 28 ನವೆಂಬರ್ 2022, 14:36 IST
.
.   

ತಿರುವನಂತಪುರ: ಸಿಲ್ವರ್‌ಲೈನ್‌ ಸೆಮಿ ಹೈ–ಸ್ಪೀಡ್‌ ರೈಲು ಯೋಜನೆಗೆ ಕರ್ನಾಟಕ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನ ವಿಫಲವಾದ ಬಳಿಕ ಕೇರಳವು ಈ ಯೋಜನೆಯನ್ನು ಕೈಬಿಟ್ಟಿದೆ.

ಭೂಮಾಪನ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನಿಯೋಜಿಸಿದ್ದ 200 ಅಧಿಕಾರಿಗಳಿಗೆ ಮಾತೃ ಇಲಾಖೆಗೆ ಮರಳುವಂತೆ ನಿರ್ದೇಶಿಸಿ ಸರ್ಕಾರ ಆದೇಶ ಹೊರಡಿಸಿರುವುದು ಇದನ್ನು ಪುಷ್ಟೀಕರಿಸಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದ ನಂತರ ಯೋಜನೆ ಕುರಿತ ಮುಂದಿನ ತೀರ್ಮಾನಗಳನ್ನು ತಿಳಿಸಲಾಗುವುದು ಎಂದೂ ಆದೇಶದಲ್ಲಿ ಹೇಳಲಾಗಿದೆ.

‘ಯಾವುದೇ ಬೆಲೆ ತೆತ್ತಾದರೂ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಈ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದರು. ಜನರ ತೀವ್ರ ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿ ಗಡಿ ಗುರುತಿಸುವ ಕಲ್ಲುಗಳನ್ನು ಸ್ಥಾಪಿಸಲಾಗಿತ್ತು.

ADVERTISEMENT

ಕೇಂದ್ರದ ಬಿಜೆಪಿ ಸರ್ಕಾರವು ಈ ಯೋಜನೆಗೆ ಇದುವರೆಗೂ ಒಪ್ಪಿಗೆ ನೀಡಿಲ್ಲ. ಯೋಜನೆಯನ್ನು ಮಂಗಳೂರಿನವರೆಗೆ ವಿಸ್ತರಿಸಲು ಕೇರಳ ಸರ್ಕಾರವು ಕರ್ನಾಟಕಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಬಗ್ಗೆ ಕರ್ನಾಟಕ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದ ನಂತರವೇ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿರುವುದಾಗಿ ಇದೀಗ ಕೇರಳ ಸರ್ಕಾರ ಹೇಳಿದೆ. ರೈಲ್ವೆ ಇಲಾಖೆ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.