ADVERTISEMENT

ವಿಮಾನ ಅಪಘಾತ ಸಂತ್ರಸ್ತರಿಂದ ಆಸ್ಪತ್ರೆ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 21:15 IST
Last Updated 5 ಆಗಸ್ಟ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೋಯಿಕ್ಕೋಡ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದವರ ಕುಟುಂಬದವರು ಮತ್ತು ಗಾಯಾಳುಗಳು ದೇಣಿಗೆ ನೀಡುವ ಮೂಲಕ, ಸ್ಥಳೀಯರಿಗಾಗಿ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣಕ್ಕೆ ನೆರವಾಗಲು ನಿರ್ಧರಿಸಿದ್ದಾರೆ.

2020ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಮಧ್ಯೆ ವಂದೇ ಭಾರತ್ ಅಭಿಯಾನದ ಅಡಿ ದುಬೈನಿಂದ ಭಾರತೀಯರನ್ನು ಹೊತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೋಯಿಕ್ಕೋಡ್‌ ವಿಮಾನ ನಿಲ್ದಾಣಕ್ಕೆ ಬಂದಿತ್ತು. ರನ್‌ವೇಯಲ್ಲಿ ಇಳಿದ ನಂತರ ಜಾರಿದ್ದ ವಿಮಾನವು, ಮುಂದಿದ್ದ ಕಂದಕಕ್ಕೆ ಬಿದ್ದು ಹೋಳಾಗಿತ್ತು. ಅವಘಡದಲ್ಲಿ 21 ಜನರು ಮೃತಪಟ್ಟು 169 ಮಂದಿ ಗಾಯಗೊಂಡಿದ್ದರು.

ಕತ್ತಲಲ್ಲಿ ನಡೆದಿದ್ದ ಈ ಅವಘಡದಲ್ಲಿ ಸಂತ್ರಸ್ತರ ನೆರವಿಗೆ ಮೊದಲು ಧಾವಿಸಿದ್ದು ಸ್ಥಳೀಯರು. ಅವಘಡದ ಸ್ಥಳದಲ್ಲಿ ಉಂಟಾಗಬಹುದಾದ ಅಪಾಯವನ್ನು ಲೆಕ್ಕಿಸದೆ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದರು. ಇದಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಸಂತ್ರಸ್ತರು, ಆಸ್ಪತ್ರೆ ಕಟ್ಟಡ ನಿರ್ಮಿಸಲು ಮುಂದಾಗಿದ್ದಾರೆ.

ADVERTISEMENT

ಅವಘಡದ ಸಂಬಂಧ ವಿಮಾನಯಾನ ಕಂಪನಿಯು ನೀಡಿರುವ ಪರಿಹಾರದಲ್ಲೇ, ಹಲವರು ಸ್ವಲ್ಪ ಪ್ರಮಾಣವನ್ನು ದೇಣಿಗೆ ನೀಡಿ ₹50 ಲಕ್ಷ ಒಟ್ಟು ಮಾಡಿದ್ದಾರೆ. ಅವಘಡ ಸಂಭವಿಸಿ ಇದೇ ಭಾನುವಾರಕ್ಕೆ ಎರಡು ವರ್ಷ ಆಗಲಿದೆ.ಆಸ್ಪತ್ರೆ ನಿರ್ಮಾಣ ಸಂಬಂಧದ ಪ್ರಸ್ತಾವವನ್ನು ಅಂದು ಸರ್ಕಾರಕ್ಕೆ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.