ನವದೆಹಲಿ: ಎಲ್ಅಂಡ್ಟಿ ಕಂಪನಿ ಸಿಇಒ ಎಸ್.ಎನ್. ಸುಬ್ರಹ್ಮಣ್ಯನ್ ಅವರ ‘ವಾರಕ್ಕೆ 90 ಗಂಟೆಗಳ ಕೆಲಸ’ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು ಎಂದು ಮಾಜಿ ಪ್ರಧಾನಿ ನೆಹರೂ ಮತ್ತು ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದರು.
ನೂತನವಾಗಿ ನಿರ್ಮಾಣಗೊಂಡಿರುವ ಪಕ್ಷದ ಕೇಂದ್ರ ಕಚೇರಿ ಉದ್ಘಾಟನೆ ಬಳಿಕ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ‘ಈ ನೂತನ ಕಟ್ಟಡವನ್ನು ನಿರ್ಮಿಸಿದ ಎಲ್ಅಂಡ್ಟಿ ಕನ್ಸ್ಟ್ರಕ್ಷನ್ ಕಂಪನಿ, ಅದರ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ, ಕಂಪನಿ ಸಿಇಒ ಮಾಡಿರುವ ‘ವಾರಕ್ಕೆ 90 ಗಂಟೆ ಕೆಲಸ’ ಹೇಳಿಕೆಗೆ ನನ್ನ ಅಸಮ್ಮತಿಯಿದೆ’ ಎಂದರು.
‘ಒಬ್ಬ ಕಾರ್ಮಿಕ 8 ಗಂಟೆಗಳ ಕಾಲ ಕೆಲಸ ಮಾಡಿ ಆಯಾಸಗೊಳ್ಳುತ್ತಾನೆ. ಅದಕ್ಕಾಗಿಯೇ ಅಂಬೇಡ್ಕರ್ ಮತ್ತು ನೆಹರೂ ಅವರು ಕಾರ್ಖಾನೆ ಕಾಯ್ದೆ ಜಾರಿಗೆ ತರುವಾಗ ಕಾರ್ಮಿಕರು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸಬಾರದು ಎಂದಿದ್ದರು’ ಎಂದರು.
‘ಯಾರೋ ಒಬ್ಬರು 9 ಗಂಟೆ ಕೆಲಸ ಮಾಡಿ ಎಂದು ಹೇಳಿಕೆ ನೀಡಿದರೆ, ಇವರು(ಎಲ್ಅಂಡ್ಟಿ ಸಿಇಒ) 12 ಗಂಟೆ, 14 ಗಂಟೆ ಕೆಲಸ ಮಾಡಿ ಎಂದು ಹೇಳುತ್ತಾರೆ. ಈ ಅಭಿಪ್ರಾಯವನ್ನು ಅವರು ಬಿಟ್ಟುಬಿಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.