ADVERTISEMENT

ಸಚಿವ ಅನುರಾಗ್ ಹೇಳಿಕೆಯಿಂದ ನನ್ನ ಘನತೆಗೆ ಚ್ಯುತಿ: ಮಲ್ಲಿಕಾರ್ಜುನ ಖರ್ಗೆ

ಅನುರಾಗ್ ಠಾಕೂರ್ ರಾಜೀನಾಮೆಗೆ ಆಗ್ರಹ

ಪಿಟಿಐ
Published 3 ಏಪ್ರಿಲ್ 2025, 14:15 IST
Last Updated 3 ಏಪ್ರಿಲ್ 2025, 14:15 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಬಿಜೆಪಿ ಸಂಸದ ಅನುರಾಗ್ ಠಾಕೂರ್ ತಮ್ಮ ವಿರುದ್ಧ ಲೋಕಸಭೆಯಲ್ಲಿ ಮಾಡಿದ ಗಂಭೀರ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು. 

‘ನನ್ನನ್ನು ಬೆದರಿಸಿ, ನಾನು ತಲೆ ತಗ್ಗಿಸುವಂತೆ ಮಾಡಲು ಬಿಜೆಪಿ ನಾಯಕರು ಬಯಸಿರಬಹುದು. ಆದರೆ, ನಾನು ಎಂದಿಗೂ ತಲೆ ಬಾಗುವುದಿಲ್ಲ ಎಂಬ ಮಾತನ್ನು ಅವರಿಗೆ ನೆನಪಿಸಲು ಬಯಸುತ್ತೇನೆ’ ಎಂದು ಹೇಳಿದರು. 

ಗುರುವಾರ ರಾಜ್ಯಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಈ ಬಗ್ಗೆ ಪ್ರಸ್ತಾಪಿಸಿದ ಖರ್ಗೆ, ‘ನನ್ನ ಜೀವನವು ತೆರೆದ ಪುಸ್ತಕವಾಗಿದ್ದು, ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಪಾಲಿಸಿದ್ದೇನೆ. ಸುಮಾರು 60 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಎಂದಿಗೂ ಇಂಥ ಸನ್ನಿವೇಶ ಎದುರಿಸಿಲ್ಲ. ಬುಧವಾರ ಸಂಸದ ಅನುರಾಗ್ ಠಾಕೂರ್ ನನ್ನ ವಿರುದ್ಧ ತಪ್ಪು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ನನ್ನ ವಿರುದ್ಧ ನೀಡಿರುವ ಮಾನಹಾನಿ ಹೇಳಿಕೆಯನ್ನು ಹಿಂಪಡೆಯುವಂತೆ ನನ್ನ ಸಹೋದ್ಯೋಗಿಗಳು ಒತ್ತಾಯಿಸಿದ್ದರು’ ಎಂದರು. 

ADVERTISEMENT

‘ನನ್ನ ವ್ಯಕ್ತಿತ್ವಕ್ಕೆ ಹಾನಿಯಾಗಿದೆ. ಎಲ್ಲ ಮಾಧ್ಯಮಗಳು ಆ ಸುದ್ದಿಯನ್ನು ಬಿತ್ತರಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಹರಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

‘ರಾಜ್ಯಸಭೆಯ ಸಭಾ ನಾಯಕ ಜೆ.ಪಿ. ನಡ್ಡಾ ಅವರು ಕ್ಷಮೆ ಕೋರಬೇಕು. ಆಡಳಿತಾರೂಢ ಪಕ್ಷ ಮಾಡಬಹುದಾದ ಕನಿಷ್ಠ ಕೆಲಸ ಇದಾಗಿದ್ದು, ಅದನ್ನು ಮಾಡಲೇಬೇಕು. ನನ್ನ ವಿರುದ್ಧದ ಆರೋಪಗಳನ್ನು ಠಾಕೂರ್ ಸಾಬೀತುಪಡಿಸದಿದ್ದರೆ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಆರೋಪ ಸಾಬೀತುಪಡಿಸಿದಲ್ಲಿ, ನಾನು ರಾಜೀನಾಮೆ ನೀಡಲು ಸಿದ್ಧ’ ಎಂದರು. 

ಖರ್ಗೆ ಅವರ ಭಾಷಣ ಮುಗಿದ ಕೂಡಲೇ ಪ್ರತಿಪಕ್ಷಗಳ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ, ಹೊರ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.