ಯಾತ್ರಿಕರನ್ನು ರಕ್ಷಣೆ ಮಾಡಿದ ಭದ್ರತಾ ಸಿಬ್ಬಂದಿ
ಚಿತ್ರ ಕೃಪೆ: ITBP_official
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ ಕಿನ್ನೌರ್ ಕೈಲಾಸ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಮಧ್ಯದಲ್ಲೇ ಸಿಲುಕಿದ್ದ 413 ಯಾತ್ರಿಕರನ್ನು ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ತಂಗ್ಲಿಪ್ಪಿ ಮತ್ತು ಕಂಗರಂಗ್ ನಡುವಿನ ಸೇತುವೆ ಮಳೆಯಿಂದಾಗಿ ಕೊಚ್ಚಿಹೋಗಿದ್ದು, ಸೇತುವೆ ಬಳಿ ಯಾತ್ರಿಕರು ಸಿಲುಕಿದ್ದರು. ಜಿಪ್ಲೈನ್ ಮೂಲಕ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಯಾತ್ರಿಕರ ರಕ್ಷಣಾ ಕಾರ್ಯದ ವಿಡಿಯೊವನ್ನು ಇಂಡೊ– ಟಿಬೆಟಿಯನ್ ಗಡಿ ಪೊಲೀಸರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಕೈಲಾಸ ಯಾತ್ರೆಯ ಚಾರಣದ ಹಾದಿ ಹದಗೆಟ್ಟಿದ್ದು, ನಡೆದಾಡಲು ಅಪಾಯಕಾರಿಯಾಗಿದೆ. ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ಆದೇಶದವರೆಗೆ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.
ಕಿನ್ನೌರ್ ಕೈಲಾಸವನ್ನು ಭಗವಂತ ಶಿವನ ಚಳಿಗಾಲದ ವಾಸಸ್ಥಾನ ಎಂದೇ ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 19,850 ಅಡಿ ಎತ್ತರದಲ್ಲಿದೆ. ಈ ಬಾರಿ ಕಿನ್ನೌರ್ ಕೈಲಾಸ ಯಾತ್ರೆಯು ಜುಲೈ15ಕ್ಕೆ ಆರಂಭವಾಗಿದ್ದು ಆ.30ಕ್ಕೆ ಕೊನೆಗೊಳ್ಳಲಿದೆ.
ರಾಜ್ಯದಾದ್ಯಂತ ಮಳೆ ಮುಂದುವರಿದಿದ್ದು, ಶಿಕ್ಷಣ ಸಂಸ್ಥೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಾಲ್ಕು ರಾಷ್ಟ್ರೀಯ ಹೆದ್ದಾರಿ ಸೇರಿ 617 ರಸ್ತೆಗಳು ಬಂದ್ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.