ADVERTISEMENT

ಪ್ರವಾಹ ಪರಿಹಾರ: ₹1,199 ಕೋಟಿಗೆ ರಾಜ್ಯದ ಮನವಿ, ಕೇಂದ್ರದಿಂದ ₹546 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 13:41 IST
Last Updated 19 ನವೆಂಬರ್ 2018, 13:41 IST
ಪ್ರವಾಹ ಸಂದರ್ಭದಲ್ಲಿ ಮಡಿಕೇರಿ ಸಮೀಪದ ಜೋಡಪಾಲದಲ್ಲಿ ಗುಡ್ಡ ಕುಸಿದಿರುವುದು. ರಸ್ತೆ ಸಂಪರ್ಕ ಕಳೆದುಕೊಂಡು, ಸ್ಥಳೀಯರು ಪರದಾಡುವಂತಾಗಿತ್ತು. -ಪ್ರಜಾವಾಣಿ ಚಿತ್ರ
ಪ್ರವಾಹ ಸಂದರ್ಭದಲ್ಲಿ ಮಡಿಕೇರಿ ಸಮೀಪದ ಜೋಡಪಾಲದಲ್ಲಿ ಗುಡ್ಡ ಕುಸಿದಿರುವುದು. ರಸ್ತೆ ಸಂಪರ್ಕ ಕಳೆದುಕೊಂಡು, ಸ್ಥಳೀಯರು ಪರದಾಡುವಂತಾಗಿತ್ತು. -ಪ್ರಜಾವಾಣಿ ಚಿತ್ರ   

ನವದೆಹಲಿ: ರಾಜ್ಯದ ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ ಸ್ಥಿತಿಯ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ₹ 546.21 ಕೋಟಿ ಅನುದಾನವನ್ನು ಪರಿಹಾರ ಮಂಜೂರು ಮಾಡಲು ಒಪ್ಪಿಗೆ ಸೂಚಿಸಿದೆ.

ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್‌ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿ (ಎನ್‌ಡಿಆರ್‌ಎಫ್‌) ಅಡಿ ಈ ಅನುದಾನವನ್ನು ಮಂಜೂರು ಮಾಡಲು ನಿರ್ಧರಿಸಲಾಯಿತು.

ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.

ADVERTISEMENT

ಭಾರಿ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿ ಮನೆಗಳು, ರಸ್ತೆ, ಕೃಷಿ ಮತ್ತು ತೋಟಗಾರಿಕೆ ಭೂಮಿ ಕೊಚ್ಚಿ ಹೋಗಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿತ್ತು. ಒಟ್ಟು 67 ಜನ ಸಾವಿಗೀಡಾಗಿದ್ದರು.

ಪ್ರವಾಹದಿಂದ ₹ 3,705 ಕೋಟಿ ಮೌಲ್ಯದ ನಷ್ಟ ಉಂಟಾಗಿದೆ. ₹ 1,199.80 ಕೋಟಿ ಪರಿಹಾರ ನೀಡುವ ಮೂಲಕ ಸಂತ್ರಸ್ತರ ನೆರವಿಗೆ ಬರಬೇಕು ಎಂದು ರಾಜ್ಯ ಸರ್ಕಾರ ಸೆಪ್ಟೆಂಬರ್‌ ತಿಂಗಳಲ್ಲೇ ಕೇಂದ್ರಕ್ಕೆ ಮನವಿ ಮಾಡಿತ್ತು. ಕೇಂದ್ರದ ಅಧ್ಯಯನ ತಂಡ ಈ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು.

ಮುಂಗಾರು ವೈಫಲ್ಯದಿಂದಲೂ ರಾಜ್ಯದ 100 ತಾಲ್ಲೂಕುಗಳಲ್ಲಿ ಬರ ಆವರಿಸಿದ್ದು, ಅಂದಾಜು 16,662 ಕೋಟಿ ನಷ್ಟ ಸಂಭವಿಸಿದೆ. ಎನ್‌ಡಿಆರ್‌ಎಫ್‌ ಅಡಿ ₹ 2,434 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ನೇತೃತ್ವದ ನಿಯೋಗ ಕಳೆದ ಅಕ್ಟೋಬರ್‌ 30ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.