ADVERTISEMENT

ಕೃಷ್ಣ ಜನ್ಮಭೂಮಿ–ಶಾಹೀ ಈದ್ಗಾ ಪ್ರಕರಣ: ಸುಪ್ರೀಂಗೆ ಅರ್ಜಿ; ವಿಚಾರಣೆ ಮುಂದೂಡಿದ HC

ಪಿಟಿಐ
Published 18 ಡಿಸೆಂಬರ್ 2023, 14:24 IST
Last Updated 18 ಡಿಸೆಂಬರ್ 2023, 14:24 IST
<div class="paragraphs"><p>ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಮತ್ತು ಶಾಹೀ ಈದ್ಗಾ ಮಸೀದಿ</p></div>

ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಾಲಯ ಮತ್ತು ಶಾಹೀ ಈದ್ಗಾ ಮಸೀದಿ

   

ಪಿಟಿಐ ಚಿತ್ರ

ಪ್ರಯಾಗ್‌ರಾಜ್‌: ಕೃಷ್ಣ ಜನ್ಮಭೂಮಿ ಹಾಗೂ ಶಾಹೀ ಈದ್ಗಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಗದ ಸರ್ವೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದನ್ನು ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರಿಂದ, ಸರ್ವೆ ವಿಧಾನ ತಿಳಿಸುವುದಾಗಿ ಹೇಳಿದ್ದ ಅಲಹಾಬಾದ್ ಹೈಕೋರ್ಟ್ ಸೋಮವಾರ ವಿಚಾರಣೆ ಮುಂದೂಡಿದೆ.

ADVERTISEMENT

‘ಅಡ್ವೊಕೇಟ್ ಕಮಿಷನರ್‌ಗಳ ಮೇಲ್ವಿಚಾರಣೆಯಲ್ಲಿ ಮಥುರಾ ಶ್ರೀಕೃಷ್ಣ ದೇವಾಲಯ ಪಕ್ಕದಲ್ಲಿರುವ ಶಾಹೀ ಈದ್ಗಾ ಮಸೀದಿ ಜಾಗದಲ್ಲಿ ಸರ್ವೆ ನಡೆಸುವ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಜ. 9ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ’ ಎಂದು ಶಾಹೀ ಈದ್ಗಾ ಪರ ವಕೀಲರು ಹೈಕೋರ್ಟ್ ಗಮನಕ್ಕೆ ತಂದರು. ಹೀಗಾಗಿ ವಿಚಾರಣೆ ಮುಂದೂಡುವಂತೆ ಪೀಠವನ್ನು ಕೋರಿದರು.

ಅಲಹಾಬಾದ್ ಹೈಕೋರ್ಟ್‌ನಲ್ಲಿ ಕಳೆದ ಗುರುವಾರ ನಡೆದ ವಿಚಾರಣೆ ವೇಳೆ, ಮಸೀದಿ ಇರುವ ಜಾಗದಲ್ಲಿ ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದ ದೇವಾಲಯದ ಕುರುಹುಗಳಿವೆ ಎಂಬ ಹಿಂದೂ ಪರ ಅರ್ಜಿದಾರರ ವಾದವನ್ನು ಒಪ್ಪಿದ ನ್ಯಾಯಾಲಯ, ಸತ್ಯಾಸತ್ಯತೆ ಅರಿಯಲು ಅಡ್ವೊಕೇಟ್ ಕಮಿಷನರ್‌ ಮೇಲ್ವಿಚಾರಣೆಯಲ್ಲಿ ಸರ್ವೆ ನಡೆಸುವಂತೆ ಪೀಠ ಸೂಚಿಸಿತ್ತು.

ಸರ್ವೆಗೆ ತಡೆ ನೀಡುವಂತೆ ಮುಸ್ಲಿಂ ಅರ್ಜಿದಾರರ ಮೌಖಿಕ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು. ಜತೆಗೆ ಹೈಕೋರ್ಟ್‌ನ ಆದೇಶವನ್ನು ಸರಿಯಾದ ಕ್ರಮದಲ್ಲಿ ಪ್ರಶ್ನಿಸುವಂತೆ ಸಲಹೆ ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.