ನವದೆಹಲಿ: ನೌಕರರ ಭವಿಷ್ಯ ನಿಧಿ (ಇಪಿಎಫ್) ನಿಯಮಗಳಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಹಲವು ತಿದ್ದುಪಡಿಗಳನ್ನು ತಂದಿದೆ. ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಅನುಕೂಲವಾಗುವಂತೆ ಮತ್ತು ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದೆ.
‘ಒಂದೊಮ್ಮೆ ಉದ್ಯೋಗದಾತ ಸಂಸ್ಥೆಯು ತನ್ನ ಪಾಲಿನ ಕೊಡುಗೆಯನ್ನು ಸಕಾಲದಲ್ಲಿ ನೀಡದಿದ್ದರೆ ಉದ್ಯೋಗಿಗೆ ಬಡ್ಡಿ ನೀಡಲಾಗುತ್ತದೆ ಮತ್ತು ಸಂಸ್ಥೆಗೆ ದಂಡ ವಿಧಿಸಲಾಗುತ್ತದೆ. ಸಂಸ್ಥೆಯು ಪದೇ ಪದೇ ಇದೇ ರೀತಿ ಮಾಡಿದರೆ ಅಂಥ ಸಂಸ್ಥೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವಾಲಯ ಹೇಳಿದೆ.
‘ಉದ್ಯೋಗದಾತ ಸಂಸ್ಥೆಯು ಇಪಿಎಫ್ ಅನ್ನು ಪಾವತಿ ಮಾಡಿದ ಕೂಡಲೇ ಉದ್ಯೋಗಿ ಮೊಬೈಲ್ಗೆ ಮಸೇಜ್ ಮತ್ತು ಇ–ಮೇಲ್ ಸಂದೇಶ ಬರುತ್ತದೆ. ಅಲ್ಲದೆ ಉದ್ಯೋಗಿಯ ಪಿಎಫ್ ಖಾತೆಗೆ ಬಡ್ಡಿ ಹಣ ಪಾವತಿಯಾದ ಮಾಹಿತಿಯೂ ಬರಲಿದೆ’ ಎಂದು ತಿಳಿಸಿದೆ.
‘ಎಲ್ಲ ಸದಸ್ಯರು ತಮ್ಮ ಇಪಿಎಫ್ ಖಾತೆಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಜೋಡಿಸುವುದು ಕಡ್ಡಾಯ. ಈ ಪ್ರಕ್ರಿಯೆ ಪೂರ್ಣಗೊಳಿಸದ ಉದ್ಯೋಗಿಯ ಖಾತೆಯನ್ನು ರದ್ದು ಮಾಡಲಾಗುತ್ತದೆ’ ಎಂದು ವಿವರಿಸಿದೆ.
‘ಕೃತಕ ಬುದ್ಧಿಮತ್ತೆ ಬಳಸಿಕೊಂಡು ಚಾಟ್ಬೋರ್ಡ್ವೊಂದನ್ನು ರೂಪಿಸಲಾಗಿದೆ. ಉದ್ಯೋಗಿಗಳು ತಮ್ಮ ಎಲ್ಲ ಪ್ರಶ್ನೆಗಳಿಗೆ ಈ ಚಾಟ್ಬೋರ್ಡ್ ಬಳಸಿಕೊಂಡು ಉತ್ತರಕಂಡುಕೊಳ್ಳಬಹುದು. ಇದರಿಂದ ಸಮಸ್ಯೆಗಳಿಗೆ ತತ್ಕ್ಷಣದಲ್ಲಿ ಪ್ರತಿಕ್ರಿಯೆ ಸಿಗಲಿದೆ’ ಎಂದು ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.