ADVERTISEMENT

Video-ಭೀಕರ ಅಪಘಾತ: ಗಾಯಾಳು ಸಂತ್ರಸ್ತರನ್ನ ನೋಡಿ ಗಳಗಳನೇ ಅತ್ತ ಐಎಎಸ್ ಅಧಿಕಾರಿಣಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2022, 6:24 IST
Last Updated 29 ಸೆಪ್ಟೆಂಬರ್ 2022, 6:24 IST
ಡಾ.ರೋಶನ್ ಜಾಕೋಬ್
ಡಾ.ರೋಶನ್ ಜಾಕೋಬ್   

ಲಖಿಂಪುರ ಖೇರಿ:ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಬುಧವಾರ ಖಾಸಗಿ ಬಸ್ ಮತ್ತು ಮಿನಿ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾಗಿ, 14 ಮಂದಿ ಗಾಯಗೊಂಡಿದ್ದರು.

ಈ ಅಪಘಾತದ ಭೀಕರತೆ ಹಾಗೂ ಅಪಘಾತದಲ್ಲಿ ಗಾಯಗೊಂಡ ಬಡ ಸಂತ್ರಸ್ತರನ್ನು ಕಂಡುಲಖನೌ ವಿಭಾಗೀಯ ಕಮೀಷನರ್ ಹಾಗೂ ಐಎಎಸ್ ಅಧಿಕಾರಿಣಿ ಡಾ.ರೋಶನ್ ಜಾಕೋಬ್ ಅವರು ಗಳಗಳನೇ ಅತ್ತಿದ್ದಾರೆ.

ಗಾಯಾಳುಗಳನ್ನು ದಾಖಲು ಮಾಡಿದ್ದ ಲಖನೌ ಆಸ್ಪತ್ರೆಗೆ ದೌಡಾಯಿಸಿದ ಡಾ ರೋಶನ್ ಅವರು, ಗಾಯಗೊಂಡಿದ್ದ ಮಗುವೊಂದರ ಬಳಿ ತೆರಳಿ ಮಗುವಿನ ತಾಯಿಗೆ ಸಮಾಧಾನ ಮಾಡಿದ್ದಾರೆ. ನಂತರ ಮಗುವಿನ ಪರಿಸ್ಥಿತಿ ಕಂಡು ಕಣ್ಣೀರಾಗಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ವೈರಲ್ ಆಗಿವೆ.

ADVERTISEMENT

ಧೌರ್ಹರಾದಿಂದ ಲಖನೌಗೆ ತೆರಳುತ್ತಿದ್ದ ಬಸ್, ರಾಷ್ಟ್ರೀಯ ಹೆದ್ದಾರಿ 730ರಲ್ಲಿನ ಐರಾ ಸೇತುವೆ ಕಡೆಯಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಮಿನಿ ಟ್ರಕ್‌ವೊಂದಕ್ಕೆ ಡಿಕ್ಕಿ ಹೊಡೆದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಂಪಾಲ್ ಸಿಂಗ್ ತಿಳಿಸಿದ್ದಾರೆ.

ಬಸ್ ಅಪಘಾತದ ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ತೆರಳಿದ ಪೊಲೀಸರು, ಗ್ಯಾಸ್ ಕಟ್ಟರ್‌ನಿಂದ ಬಸ್ ಅನ್ನು ಕತ್ತರಿಸಿ ಗಾಯಾಳುಗಳನ್ನು ರಕ್ಷಿಸಿದರು. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅಪಘಾತದಲ್ಲಿ ಮಡಿದವರ ಬಗ್ಗೆ ಸಂತಾಪ ಸೂಚಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸಾ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.