ADVERTISEMENT

ಲಖಿಂಪುರ–ಖೇರಿ ರೈತರ ಹತ್ಯೆ ಪ್ರಕರಣ: ವಿಚಾರಣೆಗೆ ಹಾಜರಾಗದ ಆಶಿಶ್ ಮಿಶ್ರಾ

ಆರೋಪಿಗೆ ಪೊಲೀಸರಿಂದ ಮತ್ತೊಂದು ನೋಟಿಸ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 20:25 IST
Last Updated 8 ಅಕ್ಟೋಬರ್ 2021, 20:25 IST
ಲಖಿಂಪುರ-ಖೇರಿ ರೈತರ ಹತ್ಯೆಯನ್ನು ಖಂಡಿಸಿ ಅಮೃತಸರದಲ್ಲಿ ರೈತರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಿದರು  ಪಿಟಿಐ ಚಿತ್ರ
ಲಖಿಂಪುರ-ಖೇರಿ ರೈತರ ಹತ್ಯೆಯನ್ನು ಖಂಡಿಸಿ ಅಮೃತಸರದಲ್ಲಿ ರೈತರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಿದರು  ಪಿಟಿಐ ಚಿತ್ರ   

ಲಖನೌ: ಲಖಿಂಪುರ-ಖೇರಿ ರೈತರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಶುಕ್ರವಾರ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ.

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ, ರೈತರ ಹತ್ಯೆ ಮಾಡಿದ್ದಾರೆ ಎಂದು ಮೃತ ರೈತರ ಮನೆಯವರು ಎಫ್‌ಐಆರ್ ದಾಖಲಿಸಿದ್ದಾರೆ. ಆ ಎಫ್‌ಐಆರ್ ಅನ್ವಯ ಗುರುವಾರವೇ ಆಶಿಶ್ ಮಿಶ್ರಾ ಅವರಿಗೆ ನೋಟಿಸ್ ನೀಡಲಾಗಿತ್ತು. ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ.

ಆಶಿಶ್ ಮಿಶ್ರಾ ಅವರ ತಂದೆ ಮತ್ತು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಗುರುವಾರವಷ್ಟೇ ನನ್ನ ಮಗನಿಗೆ ನೋಟಿಸ್ ನೀಡಿದ್ದಾರೆ. ಅವನಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಅವನು ವಿಚಾರಣೆಗೆ ಹಾಜರಾಗಿಲ್ಲ. ಆಶಿಶ್ ಶನಿವಾರ ವಿಚಾರಣಾಧಿಕಾರಿಗಳ ಎದುರು ಹಾಜರಾಗಲಿದ್ದಾನೆ. ಅವನು ತಾನು ನಿರಪರಾಧಿ ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಗಳನ್ನು ನೀಡಲಿದ್ದಾನೆ’ ಎಂದು ಹೇಳಿದ್ದಾರೆ.

ADVERTISEMENT

ಆಶಿಶ್ ವಿಚಾರಣೆಗೆ ಹಾಜರಾಗದೇ ಇದ್ದ ಬೆನ್ನಲ್ಲೇ, ಪೊಲೀಸರು ಶುಕ್ರವಾರ ಮತ್ತೊಂದು ಸಮನ್ಸ್ ಜಾರಿ ಮಾಡಿದ್ದಾರೆ. ಆಶಿಶ್ ಮಿಶ್ರಾ ಅವರ ಮನೆಯ ಗೇಟಿನ ಮುಂಭಾಗ ಸಮನ್ಸ್ ಅಂಟಿಸಿದ್ದಾರೆ. ‘ಶೀಘ್ರವೇ ವಿಚಾರಣೆಗೆ ಹಾಜರಾಗಿ. ಇಲ್ಲದಿದ್ದಲ್ಲಿ ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಸಮನ್ಸ್‌ನಲ್ಲಿ
ಸೂಚಿಸಲಾಗಿದೆ.

ರೈತರ ಮೇಲೆ ಜೀಪು ನುಗ್ಗಿಸಿದಾಗ ಆಶಿಶ್ ಮಿಶ್ರಾ ಆ ಜೀಪಿನಲ್ಲಿಯೇ ಇದ್ದರು. ನಂತರ ರೈತನೊಬ್ಬನ ಮೇಲೆ ಗುಂಡು ಹಾರಿಸಿದರು ಎಂಬುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು
ಹೇಳಿವೆ.

ಆಶಿಶ್ ನಾಪತ್ತೆ

ರೈತರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರಾ ಈಗ ಎಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲ. ಅವರು ನಾಪತ್ತೆಯಾಗಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ-ಖೇರಿ ಜಿಲ್ಲೆಯು ನೇಪಾಳದೊಂದಿಗೆ ಗಡಿ ಹಂಚಿಕೊಂಡಿದೆ. ಆಶಿಶ್ ನೇಪಾಳಕ್ಕೆ ನುಸುಳಿ ಹೋಗಿದ್ದಾರೆ. ಈ ಮೂಲಕ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು
ಹೇಳಿವೆ.

ಆಶಿಶ್ ಅವರು ಪಕ್ಕದ ರಾಜ್ಯ ಉತ್ತರಾಖಂಡದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಬೇರೆ ಮೂಲಗಳು ಹೇಳಿವೆ. ಆದರೆ ಅವರು ಎಲ್ಲಿ ಇದ್ದಾರೆ ಎಂಬುದು ಪತ್ತೆಯಾಗಿಲ್ಲ. ಅವರ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾ ಸಹ ಆಶಿಶ್ ಎಲ್ಲಿದ್ದಾನೆ ಎಂಬುದರ ಮಾಹಿತಿ ಇಲ್ಲ ಎಂದಿದ್ದಾರೆ.

ಸಿಜೆಐ ಕುರಿತು ತಪ್ಪು ಮಾಹಿತಿ: ಸುಪ್ರೀಂ ಕೋರ್ಟ್‌ ಅಸಮಾಧಾನ

ಲಖಿಂಪುರ–ಖೇರಿ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್‌. ವಿ. ರಮಣ ಅವರು ಭೇಟಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಮಾಡಿದ್ದ ಟ್ವೀಟ್‌ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ
ವ್ಯಕ್ತಪಡಿಸಿದೆ.

ಮಾಧ್ಯಮ ಮತ್ತು ಅದರ ಸ್ವಾತಂತ್ರ್ಯವನ್ನು ಸುಪ್ರೀಂ ಕೋರ್ಟ್ ಗೌರವಿಸುತ್ತದೆ ಆದರೆ ‘ಈ ಕೃತ್ಯ ಸರಿಯಲ್ಲ’ ಎಂದು ಕೋರ್ಟ್ ಶುಕ್ರವಾರ ಹೇಳಿದೆ.

ಲಖಿಂಪುರ ಖೇರಿ ಹಿಂಸಾಚಾರ ಮೊಕದ್ದಮೆ ಕುರಿತು ವಿಚಾರಣೆ ನಡೆಸುವ ವೇಳೆ ಕೋರ್ಟ್‌ ಈ ಪ್ರಕರಣ ಕುರಿತು ವಿಶೇಷ ಉಲ್ಲೇಖ ಮಾಡಿದೆ. ‘ಯಾರೊ ಒಬ್ಬರು ವಾಕ್‌ ಸ್ವಾತಂತ್ರ್ಯದ ಮೇರೆಯನ್ನು ಮೀರಿರುವುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕೆ ನಾವು ವಿಷಾದಿಸುತ್ತೇವೆ. ತಪ್ಪು ಚಿತ್ರಣವನ್ನು ನೀಡಲಾಗಿದೆ. ಅವರು ನಿಜಾಂಶವನ್ನು ಪರಿಶೀಲಿಸಬೇಕು’ ಎಂದು ಎನ್‌. ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೇಳಿದೆ.

ಸಂತ್ರಸ್ತರ ಕುಟುಂಬಗಳನ್ನು ಸಿಜೆಐ ಅವರು ಭೇಟಿಯಾಗಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ಟ್ವೀಟ್‌ ಮಾಡಿದೆ ಎಂದು ವಕೀಲರೊಬ್ಬರು ಗುರುವಾರ ಪೀಠಕ್ಕೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.