ಚೆನ್ನೈ: ‘ಮಾತೃ ಭಾಷೆಯ ವಿಷಯವು ಕಣಜದ ಗೂಡು ಇದ್ದಂತೆ. ಅದನ್ನು ಮುಟ್ಟುವುದು ಅಪಾಯಕಾರಿ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಗುರುವಾರ ಅಭಿಪ್ರಾಯಪಟ್ಟರು.
ಭಾಷಾ ವಿಷಯದಲ್ಲಿ ಬಿಜೆಪಿ ವಿರುದ್ಧ ತಮ್ಮ ಆಕ್ರೋಶವನ್ನು ಮುಂದುವರಿಸಿರುವ ಅವರು, ಭಾಷಾ ಸಮಾನತೆಯನ್ನು ಬಯಸುವುದು ದುರಭಿಮಾನವಾಗುವುದಿಲ್ಲ ಎಂದು ‘ಎಕ್ಸ್’ ಮಾಡಿದ್ದಾರೆ.
ನಾಥುರಾಮ್ ಗೋಡ್ಸೆ ಸಿದ್ಧಾಂತವನ್ನು (ಆರ್ಎಸ್ಎಸ್ ಮತ್ತು ಬಿಜೆಪಿ) ವೈಭವೀಕರಿಸುವ ಜನರಿಗೆ ಚೀನಾದ ಆಕ್ರಮಣ, ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ಕಾರ್ಗಿಲ್ ಯುದ್ಧದ ಸಮಯದಲ್ಲಿ ಅತ್ಯಧಿಕ ದೇಣಿಗೆ ನೀಡಿದ ಡಿಎಂಕೆ ಮತ್ತು ಅದರ ಸರ್ಕಾರದ ದೇಶಭಕ್ತಿಯನ್ನು ಪ್ರಶ್ನಿಸುವ ಧೈರ್ಯವಿದೆಯೇ, ಅವರ ‘ಸೈದ್ಧಾಂತಿಕ ಪೂರ್ವಜ’ ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದವರು ಎಂದು ಸ್ಟಾಲಿನ್ ಕಿಡಿಕಾರಿದ್ದಾರೆ.
‘ಯಾವುದೇ ವಿಷಯದ ಹೇರಿಕೆಯು ದ್ವೇಷ ಹುಟ್ಟುಹಾಕುತ್ತದೆ ಮತ್ತು ಅದು ಏಕತೆಗೆ ಧಕ್ಕೆ ತರುತ್ತದೆ. ನಿಜವಾದ ಕೋಮುವಾದಿಗಳು ಮತ್ತು ರಾಷ್ಟ್ರವಿರೋಧಿಗಳು ಹಿಂದಿ ಮತಾಂಧರು. ತಮ್ಮ ಹಕ್ಕು ಸ್ವಾಭಾವಿಕವಾದುದು. ಆದರೆ, ಅವರು ನಮ್ಮ ಪ್ರತಿರೋಧವನ್ನು ದೇಶದ್ರೋಹವೆಂದು ಭಾವಿಸುತ್ತಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ಒತ್ತಡ ಹೇರುವ ಮೂಲಕ ಕೇಂದ್ರ ಸರ್ಕಾರವು ತಮಿಳುನಾಡಿನ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ. ರಾಜ್ಯವು ಮಾತೃಭಾಷೆಗಾಗಿ ಮತ್ತೊಂದು ಯುದ್ಧವನ್ನು ಎದುರಿಸಲು ಸಿದ್ಧವಾಗಿದೆ’ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ತಮಿಳು ಭಾಷೆಗೆ ಸರಿಯಾದ ಸ್ಥಾನ ನೀಡಬೇಕೆಂದು ಒತ್ತಾಯಿಸುತ್ತಿರುವ ಡಿಎಂಕೆ ಕಾರ್ಯಕರ್ತರನ್ನು ರಾಷ್ಟ್ರವಿರೋಧಿಗಳು ಮತ್ತು ಭಾಷಾ ದುರಭಿಮಾನಿಗಳು ಎಂದು ಹಣೆಪಟ್ಟಿಹಚ್ಚುವವರ ವಿರುದ್ಧ ಕಿಡಿಕಾರಿದ ಅವರು, ‘ನೀವು ವಿಶೇಷ ಸವಲತ್ತುಗಳಿಗೆ ಒಗ್ಗಿಕೊಂಡಾಗ, ಸಮಾನತೆ ದಮನಕಾರಿಯಂತೆ ಭಾಸವಾಗುತ್ತದೆ ಎಂಬ ಪ್ರಸಿದ್ಧ ಉಲ್ಲೇಖವನ್ನು ಮಾತ್ರ ನೆನಪಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
‘ಭಾಷಾ ಸಮಾನತೆ ಬಯಸುವುದು ದುರಭಿಮಾನವಲ್ಲ. ತಮಿಳರು ಉಚ್ಚರಿಸಲು ಅಥವಾ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗದ ಭಾಷೆಯಲ್ಲಿ ಮೂರು ಅಪರಾಧ ಕಾನೂನುಗಳನ್ನು ಹೇರುವುದು ನಿಜವಾದ ಭಾಷಾ ದುರಭಿಮಾನವಾಗಿದೆ’ ಎಂದು ಅವರು ಹೊಸ ಕ್ರಿಮಿನಲ್ ಕಾನೂನುಗಳ ಹಿಂದಿ ಹೆಸರುಗಳನ್ನು ಉಲ್ಲೇಖಿಸಿ ಹರಿಹಾಯ್ದಿದ್ದಾರೆ.
‘ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡುವ ರಾಜ್ಯವನ್ನು ಕೋಮುವಾದಿಗಳು ಎರಡನೇ ದರ್ಜೆಯ ನಾಗರಿಕರೆಂದು ಪರಿಗಣಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಎಂಬ ವಿಷವನ್ನು ನಾವು ನುಂಗಲು ನಿರಾಕರಿಸಿದ್ದಕ್ಕಾಗಿ ನಮ್ಮ ರಾಜ್ಯಕ್ಕೆ ಸಿಗಬೇಕಿದ್ದ ನ್ಯಾಯಯುತ ಪಾಲನ್ನು ನಿರಾಕರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.