ನವದೆಹಲಿ: ಕಡತಗಳಿಲ್ಲದೆ ವಕೀಲನೊಬ್ಬ ವಾದ ಮಾಡುವುದು ಎಂದರೆ, ಬ್ಯಾಟ್ ಇಲ್ಲದೆ ಸಚಿನ್ ತೆಂಡೂಲ್ಕರ್ ಮೈದಾನಕ್ಕೆ ಇಳಿದಂತೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ವಕೀಲರೊಬ್ಬರಿಗೆ ಹೇಳಿದರು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರಿದ್ದ ಪೀಠದ ಮುಂದೆ ಕಡತಗಳಿಲ್ಲದೆ ವಾದ ಮಂಡಿಸಲು ಬಂದ ವಕೀಲರ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
‘ಕಪ್ಪು ಕೋಟು ಧರಿಸಿಕೊಂಡು ಕಡತಗಳಿಲ್ಲದೇ ಬಂದಿದ್ದೀರಿ. ಇದು ಸರಿಯಲ್ಲ. ನಿಮ್ಮ ಬಳಿ ಯಾವಾಗಲೂ ನೀವು ವಾದಿಸುವ ಪ್ರಕರಣಗಳ ಕಡತಗಳನ್ನು ಇಟ್ಟುಕೊಳ್ಳಬೇಕು’ ಎಂದು ಅವರು ಹೇಳಿದರು.
ಹಿಂದಿಯಲ್ಲಿ ವಾದ: ನ್ಯಾಯಾಲಯದ ಭಾಷೆ ಇಂಗ್ಲಿಷ್
ಸುಪ್ರೀಂ ಕೋರ್ಟ್ನಲ್ಲಿ ತಮ್ಮ ಪ್ರಕರಣದ ವಾದವನ್ನು ಹಿಂದಿಯಲ್ಲಿ ಮಂಡಿಸಲು ಮುಂದಾದ ವ್ಯಕ್ತಿಯೊಬ್ಬರಿಗೆ, ‘ನ್ಯಾಯಾಲಯದ ಭಾಷೆ ಇಂಗ್ಲಿಷ್. ಒಂದು ವೇಳೆ ನಿಮಗೆ ಇಂಗ್ಲಿಷ್ ಬರದಿದ್ದರೆ ವಕೀಲರೊಬ್ಬರನ್ನು ಒದಗಿಸಲಾಗುವುದು’ ಎಂದು ನ್ಯಾಯಾಲಯ ಶುಕ್ರವಾರ ಹೇಳಿದೆ.
ದೇಶದ ಹಲವು ನ್ಯಾಯಾಲಯಗಳಲ್ಲಿ ಅರ್ಜಿಯ ವಿಚಾರಣೆ ಆಗಿದೆ. ಆದರೆ, ಎಲ್ಲೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಅರ್ಜಿದಾರರು ಹಿಂದಿಯಲ್ಲಿ ಹೇಳಿದರು.
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠವು, ‘ನ್ಯಾಯಾಲಯದ ಭಾಷೆ ಇಂಗ್ಲಿಷ್ ಆಗಿದೆ. ನಮಗೆ ನೀವು ಏನು ಹೇಳುತ್ತಿದ್ದೀರಿ ಎಂದು ಅರ್ಥವಾಗುತ್ತಿಲ್ಲ. ನೀವು ಒಪ್ಪುವುದಾದರೆ, ನಾವೇ ವಕೀಲರನ್ನು ಒದಗಿಸುತ್ತೇವೆ’ ಎಂದಿತು. ಇದಕ್ಕೆ ಅರ್ಜಿದಾರರು ಒಪ್ಪಿದರು. ಹಿರಿಯ ಅರ್ಜಿದಾರರಿಗೆ ತಮ್ಮ ಪರವಾಗಿ ವಾದ ಮಂಡಿಸಲು ವಕೀಲರೊಬ್ಬರನ್ನು ಒಗದಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.