ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲೆ ವಂದನಾ ನಿರ್ಣಯದ ಗೊತ್ತುವಳಿ ಚರ್ಚೆಗೆ ಉತ್ತರವಾಗಿ ಮಾತನಾಡಿದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಮಹಾಮೈತ್ರಿ ಸರ್ಕಾರ ಅರಾಜಕತೆಯಿಂದ ಕೂಡಿರುತ್ತದೆ ಎಂದ ಬಿಜೆಪಿ ನಾಯಕರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ಭಾಷಣದ ವೇಳೆ ಭಾವುಕರಾದ ದೇವೇಗೌಡರು, ನಾನು 57 ವರ್ಷಗಳ ಕಾಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದೆ.ಇದು ನನ್ನ ಕೊನೆಯ ಭಾಷಣ ಎಂದಿದ್ದಾರೆ.ತಾವು ಪ್ರಧಾನಿಯಾಗಿದ್ದ ದಿನಗಳ ಬಗ್ಗೆ ಮಾತನಾಡಿದ ಅವರು1996- 1997ರಲ್ಲಿ 10 ತಿಂಗಳುಗಳ ಕಾಲ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದೆ.ಆಗ ವಿಪಿ ಸಿಂಗ್ ಮತ್ತು ಜ್ಯೋತಿ ಬಸು ಪ್ರಧಾನಿ ಹುದ್ದೆ ನಿರಾಕರಿಸಿದ್ದರಿಂದ ನನಗೆ ಪ್ರಧಾನಿ ಸ್ಥಾನ ಒಲಿದು ಬಂದಿತ್ತು ಎಂದಿದ್ದಾರೆ.
ತಮ್ಮ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಧನ ಸಹಾಯ ನೀಡಲು ವಿಶ್ವ ಬ್ಯಾಂಕ್ ನಿರಾಕರಿಸಿದಾಗ, ದೇಶದಲ್ಲಿದ್ದ ಕಪ್ಪು ಹಣವನ್ನು ಸರ್ಕಾರದ ಕಾರ್ಯಗಳಿಗೆ ಬಳಸಿದ್ದೆವು. ತಾನು ಸ್ವಯಂ ಘೋಷಿತ ಯೋಜನೆ (Voluntary Disclosure Scheme )ಯ ಪ್ರಸ್ತಾಪವಿಟ್ಟಾಗ ಅದನ್ನು ಆಗಿನ ವಿತ್ತ ಸಚಿವರಾಗಿದ್ದ ಪಿ. ಚಿದಂಬರಂ ನಿರಾಕರಿಸಿದ್ದರು ಎಂದು ಹೇಳಿದ್ದಾರೆ,
ಮಹಾಮೈತ್ರಿ ಬಗ್ಗೆ ಅನಗತ್ಯವಾಗಿ ಮಾತನಾಡಬೇಡಿ.ವಾಜಪೇಯಿ ಅವರು ಮಹಾಮೈತ್ರಿ ಸರ್ಕಾರದ ನೇತೃತ್ವ ವಹಿಸಿದ್ದರು. ಹೊಂದಾಣಿಕೆ ಇದ್ದರೆ ಮೈತ್ರಿ ಸರ್ಕಾರ ಉತ್ತಮ ಕೆಲಸ ಮಾಡಬಲ್ಲದು ಎಂದು ಹೇಳಿದ ಅವರು ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಹೊರಹಾಕಬಾರದು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.