ADVERTISEMENT

ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡಿದ ಆರೋಪ: ಜಾವೇದ್‌ ಅಖ್ತರ್‌ಗೆ ನೋಟಿಸ್‌

ಪಿಟಿಐ
Published 22 ಸೆಪ್ಟೆಂಬರ್ 2021, 22:26 IST
Last Updated 22 ಸೆಪ್ಟೆಂಬರ್ 2021, 22:26 IST

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ‘ಸುಳ್ಳು ಹಾಗೂ ಮಾನಹಾನಿಕರ’ ಟೀಕೆ ಮಾಡಿದ ಆರೋಪದ ಮೇಲೆನಗರದ ವಕೀಲರೊಬ್ಬರು ಗೀತ ರಚನೆಕಾರ ಜಾವೇದ್‌ ಅಖ್ತರ್‌ ಅವರಿಗೆ ಬುಧವಾರ ನೋಟಿಸ್‌ವೊಂದನ್ನು ಕಳುಹಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಜಾವೇದ್‌ ಅವರು ಆರ್‌ಎಸ್‌ಎಸ್‌ ಅನ್ನು ಟೀಕಿಸಿದ್ದರು. ಬಳಿಕ ಈ ಬಗ್ಗೆ ಕ್ಷಮೆಯಾಚಿಸಿದ್ದರು.

ಅಖ್ತರ್‌ ಅವರು ಬೇಷರತ್ತಾಗಿ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಬೇಕು. ಇದರಲ್ಲಿ ಅವರು ವಿಫಲರಾದರೆ ಅಖ್ತರ್‌ ವಿರುದ್ಧ ₹ 100 ಕೋಟಿ ಮಾನನಷ್ಟದ ಅಪರಾಧ ಪ್ರಕರಣವನ್ನು ಹೂಡುವುದಾಗಿ ವಕೀಲ ಸಂತೋಷ್‌ ದುಬೆ ಹೇಳಿದ್ದಾರೆ.

ADVERTISEMENT

ಅಖ್ತರ್‌ ಅವರು ನೋಟಿಸ್‌ ಸ್ವೀಕರಿಸಿದ ಏಳು ದಿನಗಳ ಒಳಗೆ ತಮ್ಮ ಎಲ್ಲಾ ಹೇಳಿಕೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಜಾವೇದ್‌ ಅಖ್ತರ್‌ (76) ತಾಲಿಬಾನ್‌ ಮತ್ತು ಆರ್‌ಎಸ್‌ಎಸ್‌ ನಡುವೆ ಸಾಮ್ಯತೆ ಇದೆ ಎಂದಿದ್ದರು.

ಅವರ ಈ ಹೇಳಿಕೆಗಳನ್ನು ಉಲ್ಲೇಖಿಸಿರುವ ವಕೀಲ ಸಂತೋಷ್‌, ಅಖ್ತರ್‌ ಅವರು ಐಪಿಸಿ ಸೆಕ್ಷನ್‌ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿ ಅಪರಾಧ ಮಾಡಿದ್ದಾರೆ ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.