ADVERTISEMENT

ಶ್ರೀನಗರ: ಲಷ್ಕರ್‌–ಎ–ತೈಬಾ ಉಗ್ರನ ಸೆರೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 15:06 IST
Last Updated 20 ಜನವರಿ 2022, 15:06 IST

ಶ್ರೀನಗರ: ಬುಡ್ಗಾಂ ಜಿಲ್ಲೆಯ ಚದೂರ ಪ್ರದೇಶದಲ್ಲಿ ಗುರುವಾರ ಲಷ್ಕರ್‌–ಎ–ತೈಬಾ(ಎಲ್‌ಇಟಿ) ಸಂಘಟನೆಗೆ ಸೇರಿದ ಉಗ್ರನನ್ನು ಭದ್ರತಾ ಪಡೆಗಳು ಬಂಧಿಸಿದ್ದು, ಬಂಧಿತ ಉಗ್ರನಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಮೆಮಂದರ್‌ ಪ್ರದೇಶದ ನಿವಾಸಿಯಾದ ಜಹಾಂಗೀರ್‌ ಅಹ್ಮದ್‌ ನೈಕೂ ಬಂಧಿತ ಉಗ್ರ.

‘ಉಗ್ರ ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಎಲ್‌ಇಟಿಯ ಉಗ್ರ ಸೆರೆಸಿಕ್ಕಿದ್ದಾನೆ. ಉಗ್ರನಿಂದ ಒಂದು ಪಿಸ್ತೂಲ್‌, 16 ಪಿಸ್ತೂಲ್‌ ಗುಂಡುಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪುಲ್ವಾಮದಲ್ಲಿ ಉಗ್ರ ಸಹಚರನ ಸೆರೆ:ಪುಲ್ವಾಮ ಜಿಲ್ಲೆಯ ರಾಜಪೋರಾ ಪ್ರದೇಶದಲ್ಲಿ ಗುರುವಾರ ಉಗ್ರ ಸಹಚರನೊಬ್ಬನನ್ನು ಭದ್ರತಾ ಪಡೆಗಳು ಸೆರೆ ಹಿಡಿದಿವೆ.

ಉಗ್ರ ಸಹಚರನನ್ನು ರಾಹಿಲ್‌ ಶೌಕಿತ್‌ ದಾರ್‌ ಎಂದು ಗುರುತಿಸಲಾಗಿದೆ. ಸೆರೆಸಿಕ್ಕ ಈತನ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿರುವ ಕುರಿತು ರಾಜ್‌ಪೋರಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

‘ಪೊಲೀಸ್‌ ತಪಾಸಣಾ ಕೇಂದ್ರದ ಬಳಿ ಭದ್ರತಾ ಪಡೆಗಳು ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನೊಬ್ಬನನ್ನು ತಡೆದು ವಿಚಾರಣೆ ನಡೆಸಲು ಮುಂದಾಗುತ್ತಿದ್ದಂತೆ ಆತ ಪರಾರಿಯಾಗಲು ಯತ್ನಿಸಿದ. ಅಲ್ಲದೇ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ. ನಂತರ ಆತನನ್ನು ಬೆನ್ನಟ್ಟಿ ಸೆರೆಹಿಡಿಯಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.