ADVERTISEMENT

ಕೇಜ್ರಿವಾಲ್‌ ಸಿಂಗಪುರ ಪ್ರವಾಸ: ಲೆ.ಗವರ್ನರ್ ತಿರಸ್ಕಾರ

ಪಿಟಿಐ
Published 21 ಜುಲೈ 2022, 16:27 IST
Last Updated 21 ಜುಲೈ 2022, 16:27 IST
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಸಿಂಗಪುರ ಪ್ರವಾಸ ಸಂಬಂಧ ದೆಹಲಿ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ತಿರಸ್ಕರಿಸಿದ್ದಾರೆ.

‘ಆಗಸ್ಟ್‌ 1ರಂದು ಸಿಂಗಪುರದಲ್ಲಿ ನಡೆಯಲಿರುವ ವಿಶ್ವ ನಗರಗಳ ಸಮ್ಮೇಳನವು ಮೇಯರ್‌ಗಳಿಗೆ ಸಂಬಂಧಿಸಿದ್ದು. ಮುಖ್ಯಮಂತ್ರಿಯಾಗಿರುವ ನೀವು ಇದರಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲವೆಂದು ಕೇಜ್ರಿವಾಲ್‌ಗೆ ಲೆಫ್ಟಿನೆಂಟ್‌ ಗವರ್ನರ್‌ ಸಲಹೆ ನೀಡಿದ್ದಾರೆ’ ಎಂದು ಮೂಲಗಳು ಗುರುವಾರ ತಿಳಿಸಿವೆ.

‘ಸಮ್ಮೇಳನದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ದೆಹಲಿ ಸರ್ಕಾರವು ವಿಶೇಷ ವಿಚಾರವನ್ನೇನೂ ಮಂಡಿಸುತ್ತಿಲ್ಲ. ಹೀಗಿರುವಾಗ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಅಗತ್ಯವೇನಿದೆ. ಅವರು ಪಾಲ್ಗೊಂಡರೆ ತಪ್ಪು ಸಂದೇಶ ರವಾನೆಯಾಗಲಿದೆ ಎಂದೂ ಲೆಫ್ಟಿನೆಂಟ್‌ ಗವರ್ನರ್‌ ಅಭಿಪ್ರಾಯಪಟ್ಟಿದ್ದಾರೆ’ ಎಂದೂ ಹೇಳಿವೆ.

ADVERTISEMENT

‘ವಿದೇಶಾಂಗ ಸಚಿವಾಲಯದಿಂದ ಅನುಮತಿ ಪಡೆಯುವೆವು’: ‘ಕೇಜ್ರಿವಾಲ್‌ ಅವರ ಸಿಂಗಪುರ ಪ್ರವಾಸಕ್ಕೆ ಅನುಮತಿ ನೀಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡುತ್ತೇವೆ’ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

‘ಮೇಯರ್‌ಗಳಿಗೆ ಸಂಬಂಧಿಸಿದ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳುವುದು ಸರಿಯಲ್ಲ ಎಂದು ಲೆಫ್ಟಿನೆಂಟ್‌ ಗವರ್ನರ್‌ ಸಲಹೆ ನೀಡಿದ್ದಾರೆ. ಹಿಂದೆ ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಪ್ರಧಾನ ಮಂತ್ರಿಯವರೂ ಪಾಲ್ಗೊಂಡಿದ್ದರು. ಹೀಗಿರುವಾಗ ಕೇಜ್ರಿವಾಲ್‌ ಅವರ ಪ್ರವಾಸಕ್ಕೆ ತಡೆಯೊಡ್ಡುತ್ತಿರುವುದು ಏಕೆ. ಇದರ ಹಿಂದೆ ರಾಜಕೀಯ ಹುನ್ನಾರ ಅಡಗಿರುವುದು ಸ್ಪಷ್ಟ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.