ADVERTISEMENT

ಕೇರಳ ಸಿಎಂರ ಮಾಜಿ ಪ್ರಧಾನ ಕಾರ್ಯದರ್ಶಿ ಶಿವಶಂಕರ್‌ 5 ದಿನ ಇಡಿ ಕಸ್ಟಡಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2023, 14:21 IST
Last Updated 15 ಫೆಬ್ರುವರಿ 2023, 14:21 IST
ಎಂ. ಶಿವಶಂಕರ್
ಎಂ. ಶಿವಶಂಕರ್   

ತಿರುವನಂತಪುರ: ಯುಎಇ ಮೂಲದ ಕಂಪನಿ ಪ್ರಾಯೋಜಿತ ವಸತಿ ಯೋಜನೆಯೊಂದರ ಅಕ್ರಮಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಕೋಲ್ಕತ್ತ ನ್ಯಾಯಾಲಯವು 5 ದಿನಗಳ ಕಾಲ (ಫೆ.20ರ ವರೆಗೆ) ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ.

ಕಳೆದ ತಿಂಗಳು ಸೇವೆಯಿಂದ ನಿವೃತ್ತರಾಗಿರುವ ಶಿವಶಂಕರ್ ಅವರನ್ನು ಈ ಹಿಂದೆಯೂ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ವಸತಿ ಯೋಜನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರನ್ನು ಕಳೆದ ಎರಡು ದಿನಗಳಿಂದ ಕೊಚ್ಚಿಯಲ್ಲಿ ಇ.ಡಿ ವಿಚಾರಣೆ ನಡೆಸುತ್ತಿತ್ತು. ಮಂಗಳವಾರ ತಡರಾತ್ರಿ ಅವರನ್ನು ಬಂಧಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ADVERTISEMENT

ತ್ರಿಶೂರ್ ಜಿಲ್ಲೆಯ ವಡಕ್ಕಂಚೇರಿಯಲ್ಲಿ ವಸತಿ ಯೋಜನೆಯನ್ನು ಖಾಸಗಿ ಸಂಸ್ಥೆ ಯುನಿಟಾಕ್‌ಗೆ ನೀಡಲು ಶಿವಶಂಕರ್ ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ.

₹4 ಕೋಟಿಗೂ ಅಧಿಕ ಹಣವನ್ನು ವಿವಿಧ ವ್ಯಕ್ತಿಗಳಿಗೆ ಕಮಿಷನ್ ನೀಡಿರುವುದಾಗಿ ಕಂಪನಿ ಅಧಿಕಾರಿಗಳು ತಪ್ಪೊಪ್ಪಿಕೊಂಡಿದ್ದರು. ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ಬ್ಯಾಂಕ್ ಲಾಕರ್‌ನಿಂದ ವಶಪಡಿಸಿಕೊಂಡ ಸುಮಾರು ₹1 ಕೋಟಿ ಹಣ ಶಿವಶಂಕರ್ ಕಮಿಷನ್ ಪಡೆದಿರುವ ಹಣವಿರಬಹುದು ಎಂದು ಶಂಕಿಸಲಾಗಿದೆ.

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಅಕ್ಟೋಬರ್‌ನಲ್ಲಿ ಶಿವಶಂಕರ್ ಅವರನ್ನು ಇ.ಡಿ ಬಂಧಿಸಿತ್ತು. ಆರೋಪ ಬಂದಾಗ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಜಾಮೀನು ಪಡೆದ ನಂತರ ಮತ್ತ ಸೇವೆಗೆ ಮರುಸೇರ್ಪಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.