ADVERTISEMENT

ರೈತರ ಜೊತೆ ಮಾತನಾಡುವುದಲ್ಲ- ಅವರ ಮಾತುಗಳನ್ನು ಕೇಳಿಸಿಕೊಳ್ಳಿ: ವರುಣ್‌ ಗಾಂಧಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 15:17 IST
Last Updated 1 ನವೆಂಬರ್ 2021, 15:17 IST
ವರುಣ್ ಗಾಂಧಿ
ವರುಣ್ ಗಾಂಧಿ   

ನವದೆಹಲಿ: ‘ಜನರ ಜೊತೆಗೆ ಮಾತನಾಡುವ ಬದಲಿಗೆ ಅವರ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಅವರ ಮಾತುಗಳನ್ನು ಆಲಿಸಿ’ ಎಂದು ಸಂಸದ, ಬಿಜೆಪಿ ಮುಖಂಡ ವರುಣ್‌ ಗಾಂಧಿ ಪಕ್ಷದ ಮುಖಂಡರಿಗೆ ಸಲಹೆ ನೀಡಿದ್ದಾರೆ.

ತಿದ್ದುಪಡಿಯಾಗಿರುವ ಮೂರು ಕೃಷಿ ಕಾಯ್ದೆಗಳ ವಾಪಸಾತಿಗೆ ಆಗ್ರಹಪಡಿಸಿ ಪ್ರತಿಭಟಿಸುತ್ತಿರುವ ಕೃಷಿಕ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿರುವಂತೆಯೇ ಈ ಸಲಹೆ ಕೇಳಿಬಂದಿದೆ.

ಲೋಕಸಭೆ ಕ್ಷೇತ್ರ ಪಿಲಿಭಿಟ್‌ ವ್ಯಾಪ್ತಿಯಲ್ಲಿ ಕೃಷಿಕರನ್ನು ಭೇಟಿಯಾದ ಬಳಿಕ ಅವರು ಮಾತನಾಡುತ್ತಿದ್ದರು. ಜನರ ಕಷ್ಟ ತಿಳಿಯಲು ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ಸಿಗಲಿದೆ ಎಂಬುದಕ್ಕೆ ಕಾನೂನು ರಕ್ಷಣೆ ಬೇಕಾಗಿದೆ. ಇದರಿಂದ ಮಾತ್ರವೇ ಸಗಟು ಮಾರುಕಟ್ಟೆಯಲ್ಲಿ ರೈತರ ಶೋಷಣೆ ತಪ್ಪಲಿದೆ ಎಂದು ಹೇಳಿದರು.

ADVERTISEMENT

ಕಾನೂನಾತ್ಮಕ ರಕ್ಷಣೆ ಇಲ್ಲದಿದ್ದಲ್ಲಿ ರೈತರ ಶೋಷಣೆ ಮುಂದುವರಿಯಲಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದು ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ವರುಣ್‌ ಗಾಂಧಿ ಪ್ರತಿಪಾದಿಸಿದರು.

’ಕೃಷಿಕರಿಗೆ ಸಂಬಂಧಿಸಿದಂತೆ ಪಕ್ಷಕ್ಕೆ ಭಿನ್ನವಾದ ನಿಲುವು ತಳೆದಿದ್ದಾರೆ. ಉತ್ಪಾದನೆ ವೆಚ್ಚದ ಏರಿಕೆ, ಕನಿಷ್ಠ ಬೆಂಬಲ ಬೆಲೆ ಬಲ ಇಲ್ಲದಿರುವುದು, ಹಣದುಬ್ಬರದಿಂದ ಉಂಟಾಗುತ್ತಿರುವ ಸಮಸ್ಯೆಗಳು ರೈತರ ಆತಂಕಕ್ಕೆ ಕಾರಣವಾಗಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.