ತಾನು ಬೆಳಗ್ಗೆ ಬೇಗ ಎದ್ದು ಹಲ್ಲುಜ್ಜುವುದು, ಆತುರದಲ್ಲಿ ಹಾಲು ಕುಡಿಯುವುದು, ಶಾಲೆಗೆ ಹೋಗಿ ಪಾಠ ಕಲಿಯುದರ ಬಗ್ಗೆ ಇಲ್ಲೊಬ್ಬ ಬಾಲಕಿಗೆ ತೀವ್ರ ಅಸಮಾಧಾನವಿದೆ. ವೈರಲ್ ಆಗಿರುವ ವಿಡಿಯೊಒಂದರಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸಿಡುಕಿನಿಂದ ಮಾತನಾಡಿರುವ ಗುಜರಾತಿನ ಬಾಲಕಿಗೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಹೌದು, ಪೊಲೀಸ್ ಅಧಿಕಾರಿ ಅರುಣ್ ಬೋತ್ರಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೊತುಣುಕಿನಲ್ಲಿ ಶಿಕ್ಷಣ ವ್ಯವಸ್ಥೆ ರೂಪಿಸಿದವನಿಗೆ ತಾನು ಶಿಕ್ಷೆ ಕೊಡುವುದಾಗಿ ಬಾಲಕಿಯು ಹೇಳಿಕೊಂಡಿದ್ದಾಳೆ.
ತಾನು ಪ್ರತಿ ದಿನ ಶಾಲೆಗೆ ಹೋಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೋರಿಯು, ಒಂದು ತಿಂಗಳು ಶಾಲೆಯಿಂದ ಸ್ವಾತಂತ್ರ್ಯ ಬಯಸಿದ್ದಾಳೆ. ಅವಳಿಗೆ ಬೆಳಗ್ಗೆ ಎದ್ದು ಹಲ್ಲುಜ್ಜುವುದು, ಹಾಲು ಕುಡಿಯುವುದು, ಹಲವು ವಿಷಯಗಳ ಬಗ್ಗೆ ಅಧ್ಯಯನ ಮಾಡುವುದು ಕಿರಿಕಿರಿ ಉಂಟು ಮಾಡಿತ್ತವೆಂದು ಹೇಳಿಕೊಂಡಿದ್ದಾಳೆ.
ಒಂದು ವೇಳೆ, ಶಾಲಾ ವ್ಯವಸ್ಥೆಯನ್ನು ರೂಪಿಸಿದ ವ್ಯಕ್ತಿ ನಿನ್ನ ಎದುರಿಗೆ ಬಂದರೆ ಏನು ಮಾಡುತ್ತೀಯಾ ಎಂಬ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿರುವ ಅವಳು, ‘ನಾನು ಆ ವ್ಯಕ್ತಿಯ ಮೇಲೆ ನೀರು ಸುರಿದು ತೊಳೆಯುತ್ತೇನೆ. ಆ ನಂತರ ಅವನನ್ನು ಬಟ್ಟೆಯ ರೀತಿ ಇಸ್ತ್ರಿ ಮಾಡುತ್ತೇನೆ,’ ಎಂದಿದ್ದಾಳೆ.
ದೇವರೇಕೆ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಆಹ್ಲಾದಕರವಾಗುವಂತೆ ಮಾಡಲಿಲ್ಲವೆಂದು ಪ್ರಶ್ನಿಸಿರುವ ಅವಳು, ‘ದೇವರು ಶಿಕ್ಷಣವನ್ನು ಯಾಕೆ ಇಷ್ಟೊಂದು ಕಷ್ಟದಾಯಕವಾಗಿ ಮಾಡಿದ? ಅವನು ಕಲಿಕೆಯನ್ನು ಸ್ವಲ್ಪ ಆಸಕ್ತಿದಾಯಕವಾಗುವಂತೆ ಮಾಡಿದ್ದರೆ, ನಾವು ಅದನ್ನು ಆನಂದಿಸಬಹುದಿತ್ತು,’ ಎಂದು ಹೇಳಿದ್ದಾಳೆ.
ಬಾಲಕಿಯ ಈ ದೃಷ್ಟಿಕೋನವನ್ನು ಅನೇಕರು ಒಪ್ಪಿ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೆಹಲಿ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಈ ವಿಡಿಯೊವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಇಲ್ಲಿ ಗಮನಾರ್ಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.