ಬರ್ವಾನಿ, ಮಧ್ಯಪ್ರದೇಶ: ಇಲ್ಲಿನ ಬರ್ವಾನಿ ಜಿಲ್ಲೆಯ ಬಲ್ವಾಡಿಯಲ್ಲಿ ಭಾನುವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಸ್ಥಳೀಯ ಬಿಜೆಪಿ ಮುಖಂಡರೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇತ್ತೀಚಿಗಷ್ಟೇ ಮಂದ್ಸೌರ್ನಲ್ಲಿ ಬಿಜೆಪಿ ನಾಯಕರೊಬ್ಬರನ್ನು ಹತ್ಯೆ ಮಾಡಲಾಗಿತ್ತು.
ಮನೋಜ್ ಠಾಕ್ರೆ (48) ಮೃತ ದುರ್ದೈವಿ. ಜಿಲ್ಲಾ ಕೇಂದ್ರದಿಂದ 100 ಕಿ.ಮೀ. ದೂರದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
‘ಮುಖ ಹಾಗೂ ಕತ್ತಿನ ಭಾಗದಲ್ಲಿ ಗಾಯದ ಗುರುತುಗಳಿವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಡಿ.ಭುಟಿಯಾ ತಿಳಿಸಿದ್ದಾರೆ.
‘ಕಡು ಚಳಿಯಲ್ಲಿ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದರು. ಬೆಳಿಗ್ಗೆ 6.40ರ ವೇಳೆಗೆ ಘಟನೆ ನಡೆದಿರುವ ಮಾಹಿತಿ ತಿಳಿದುಬಂತು, ಇದಾದ ಎರಡು ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ತಲುಪಿದ್ದಾರೆ’ ಎಂದು ತಿಳಿಸಿದರು.
‘ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ತನಿಖೆ ನಡೆಸಲಿದೆ’ ಎಂದರು.
ರಾಜಕೀಯ ದ್ವೇಷ: ರಾಜಕೀಯ ದ್ವೇಷದಿಂದ ಈ ಹತ್ಯೆ ನಡೆದಿದೆ ಎಂದು ಮಾಜಿ ಸಚಿವ ಅನಂತ್ ಸಿಂಗ್ ಆರ್ಯ ಅವರ ಪುತ್ರ ವಿಕಾಸ್ ಆರೋಪಿಸಿದ್ದಾರೆ.
ಕಳಕಳಿಯ ವಿಚಾರ: ‘ಇತ್ತೀಚಿನ ದಿನಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಹತ್ಯೆಯಾಗುತ್ತಿರುವುದು ನಿಜಕ್ಕೂ ಕಳಕಳಿಯ ವಿಚಾರ. ಇಂತಹ ಘಟನೆಗಳನ್ನು ಕಾಂಗ್ರೆಸ್ ಲಘುವಾಗಿ ಪರಿಗಣಿಸಿದೆ ’ ಎಂದು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.