ನವದೆಹಲಿ: ಕೊರೊನಾ ವೈರಸ್ ಸೋಂಕು ವ್ಯಾಪಿಸುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಏಕಾಏಕಿ ಲಾಕ್ಡೌನ್ ಘೋಷಿಸಿರುವುದು ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ಬಡವರು, ವಲಸಿಗರ ಸ್ಥಿತಿಯ ಕುರಿತು ಪ್ರಧಾನಿಯವರ ಗಮನಸೆಳೆದಿದ್ದಾರೆ.
‘ಇತರೆ ರಾಷ್ಟ್ರಗಳು ಘೋಷಿಸಿರುವ ಲಾಕ್ಡೌನ್ ತಂತ್ರದ ಹೊರತಾಗಿಯೂ ಇತರೆ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗಿದೆ. ಭಾರತದ ಸ್ಥಿತಿಯು ಇತರೆ ದೇಶಗಳಿಗಿಂತ ವಿಭಿನ್ನವಾಗಿದೆ. ಭಾರತದಲ್ಲಿ ದಿನಗೂಲಿ ನೌಕರರೇ ಅಧಿಕವಾಗಿದ್ದಾರೆ. ಏಕಾಏಕಿ ಲಾಕ್ಡೌನ್ ಘೋಷಿಸಿರು ವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಸಣ್ಣ ಕೈಗಾರಿಕೆಗಳು, ಫ್ಯಾಕ್ಟರಿಗಳು ಮುಚ್ಚಿರುವುದರಿಂದ ವಲಸೆ ಬಂದಂತಹ ಲಕ್ಷಾಂತರ ಕಾರ್ಮಿಕರು ತಮ್ಮ ಊರುಗಳನ್ನು ಸೇರಲು ಹೆಣಗಾಡುತ್ತಿದ್ದಾರೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಈ ಸಂದರ್ಭದಲ್ಲಿ ಕಾರ್ಮಿಕರಿಗೆ ನಾವು ನೆರವು ನೀಡಬೇಕು. ಮುಂದಿನ ಕೆಲ ತಿಂಗಳು ಅವರಿಗೆ ಸೂರು ಹಾಗೂ ನೇರವಾಗಿ ಖಾತೆಗೆ ಹಣ ತಲುಪುವಂತಾಗಬೇಕು. ಹಳ್ಳಿಗಳತ್ತ ಸಾವಿರಾರು ನಿರುದ್ಯೋಗಿ ಯುವಜನತೆ ತೆರಳುತ್ತಿದ್ದು, ಇದರಿಂದ ಸೋಂಕು ಹರಡುವ ಭೀತಿ ಎದುರಾಗಿದೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.