ADVERTISEMENT

ಲೋಕಸಭೆ ಕಲಾಪ: ಜು.26ರ ವರೆಗೂ ಮುಂದೂಡಿಕೆ

ಪಿಟಿಐ
Published 23 ಜುಲೈ 2021, 8:25 IST
Last Updated 23 ಜುಲೈ 2021, 8:25 IST
ಸಂಸತ್ ಕಲಾಪ
ಸಂಸತ್ ಕಲಾಪ   

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ವಿರೋಧ ಪಕ್ಷಗಳು ವಿವಿಧ ವಿಷಯಗಳ ಕುರಿತಂತೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಗದ್ದಲ ಉಂಟು ಮಾಡಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಬೆಳಿಗ್ಗೆ ಸದನದಲ್ಲಿ ಗಲಾಟೆ ಆರಂಭವಾಗಿದ್ದರಿಂದ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಗಿತ್ತು. ಸದನ ಮತ್ತೆ ಸೇರಿದಾಗ ಪ್ರತಿಭಟನಾ ನಿರತರು ತಮ್ಮ ಸ್ಥಾನಗಳಿಗೆ ತೆರಳಬೇಕೆಂದು ಸಭಾಧ್ಯಕ್ಷದ ಸ್ಥಾನದಲ್ಲಿದ್ದ ಕೀರ್ತಿ ಸೋಲಂಕಿ ಅವರು ಸೂಚಿಸಿದರು.

ಕೆಲ ಕಾಲ ನಡೆದ ಕಲಾಪದ ಅವಧಿಯಲ್ಲಿ ವಿವಿಧ ಸಂಸದೀಯ ಸಮಿತಿಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲು ಮತ್ತು ನೇಮಿಸಲು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಮಿತಿಯ ಕೆಲ ಸದಸ್ಯರು ಇತ್ತೀಚಿನ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವರಾಗಿ ನೇಮಕಗೊಂಡಿದ್ದಾರೆ.

ADVERTISEMENT

ವಿರೋಧ ಪಕ್ಷಗಳ ಸದಸ್ಯರು ಗಲಾಟೆ ಮುಂದುವರಿಸಿದ್ದರಿಂದ ಸೋಲಂಕಿ ಅವರು, ಸದನದ ಹಿರಿಯ ಸದಸ್ಯರಿಗೆ ಇಂತಹ ನಡವಳಿಕೆ ಒಪ್ಪುವುದಿಲ್ಲ ಎಂದು ಹೇಳಿ ನಂತರ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ಮುಂಗಾರು ಅಧಿವೇಶನದ ನಾಲ್ಕನೆಯ ದಿನವೂ ವಿರೋಧ ಪಕ್ಷಗಳು ವಿವಿಧ ವಿಷಯಗಳ ಕುರಿತಂತೆ ಪ್ರತಿಭಟನೆ ನಡೆಸಿದರು. ಲೋಕಸಭೆಯಲ್ಲಿ ಸೋಮವಾರ ಇದೇ 26ರಂದು ಕಲಾಪ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.