ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಒಬ್ಬ ಆಯುಕ್ತರಿಗೆ ಭಿನ್ನಮತ ಇದ್ದರೆ ಈ ಬಗ್ಗೆ ತಿಳಿದುಕೊಳ್ಳಲು ದೂರುದಾರರಿಗೆ ಹಕ್ಕಿದೆ ಎಂದು ಇಬ್ಬರು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆಆರೋಪದ ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯೋಗವು ದೋಷಮುಕ್ತಗೊಳಿಸಿರುವ ವಿಚಾರ ವಿವಾದವಾಗಿರುವ ಈ ಸಂದರ್ಭದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
‘ನೀತಿ ಸಂಹಿತೆ ಉಲ್ಲಂಘನೆ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಕೈಗೊಂಡ ನಿರ್ಧಾರ ಸರ್ವಸಮ್ಮತವೇ ಅಥವಾ ಭಿನ್ನಮತ ಇತ್ತೇ ಎಂಬುದನ್ನು ದೂರುದಾರರಿಗೆ ಆಯೋಗದ ಕಾರ್ಯದರ್ಶಿ ತಿಳಿಸಬೇಕು. ಭಿನ್ನಮತ ಏನು ಎಂಬುದನ್ನು ವಿವರಿಸುವ ಪತ್ರವೂ ಜತೆಗಿರಬೇಕು. ಇದನ್ನು ಆಯೋಗದ ವೆಬ್ಸೈಟ್ನಲ್ಲಿಯೂ ಪ್ರಕಟಿಸಬೇಕು’ ಎಂದು ಈ ಇಬ್ಬರು ಮಾಜಿ ಆಯುಕ್ತರು ಹೇಳಿದ್ದಾರೆ.
ಭಿನ್ನಮತವು ಆಂತರಿಕ ಸಮಾಲೋಚನೆಗಳಲ್ಲಿ ಸಹಜ ಮತ್ತು ಅದು ಪ್ರಜಾಪ್ರಭುತ್ವದ ಲಕ್ಷಣ. ಪ್ರಧಾನಿ ವಿರುದ್ಧ ದೂರು ಸಲ್ಲಿಕೆಯಾದ ಕೂಡಲೇ ನಿರ್ಧಾರ ಕೈಗೊಂಡಿದ್ದರೆ ಈಗಿನ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ ಎಂದೂ ಈ ಇಬ್ಬರು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.