ಹೈದರಾಬಾದ್ (ಪಿಟಿಐ): ಟಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಕೆಸಿಆರ್) ಅವರು ರೂಪಿಸಲು ಉದ್ದೇಶಿಸಿರುವ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದಲ್ಲಿ (ಸಂಯುಕ್ತ ರಂಗ) ಕಾಂಗ್ರೆಸ್ ಪಕ್ಷವನ್ನು ಸೇರಿಸಿಕೊಳ್ಳಲು ಯಾವುದೇ ವಿರೋಧ ಇಲ್ಲ. ಆದರೆ, ಈ ಮೈತ್ರಿಕೂಟದ ಚಾಲಕ ಸ್ಥಾನವನ್ನು ಆ ಪಕ್ಷಕ್ಕೆ ಬಿಟ್ಟುಕೊಡಲಾಗದು ಎಂದು ಟಿಆರ್ಎಸ್ ಹೇಳಿದೆ.
‘ಸಂಯುಕ್ತ ರಂಗವೇ ಚಾಲಕನ ಸ್ಥಾನದಲ್ಲಿ ಇರಬೇಕು ಮತ್ತು ಸರ್ಕಾರವನ್ನು ಮುನ್ನಡೆಸಬೇಕು ಎಂಬ ವಿಚಾರದಲ್ಲಿ ರಾವ್ ಅವರು ದೃಢವಾಗಿದ್ದಾರೆ’ ಎಂದು ಟಿಆರ್ಎಸ್ ವಕ್ತಾರ ಆಬಿದ್ ರಸೂಲ್ ಖಾನ್ ಹೇಳಿದ್ದಾರೆ.
ಸಂಯುಕ್ತ ರಂಗಕ್ಕೆ ಸ್ಥಾನಗಳ ಕೊರತೆ ಎದುರಾದರೆ ಕಾಂಗ್ರೆಸ್ ಪಕ್ಷದಿಂದ ಬಾಹ್ಯ ಬೆಂಬಲ ಪಡೆಯುವ ಆಯ್ಕೆಯನ್ನು ಪರಿಶೀಲಿಸ
ಲಾಗುವುದು. ಆದರೆ, ಸಂಯುಕ್ತ ರಂಗವು ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ ಎಂದು ಖಾನ್ ತಿಳಿಸಿದ್ದಾರೆ.
ರಾವ್ ಅವರು ಈವರೆಗೆ, ಕಾಂಗ್ರೆಸ್ ಅಥವಾ ಬಿಜೆಪಿ ಇಲ್ಲದ ಸಂಯುಕ್ತ ರಂಗದ ಬಗ್ಗೆ ಮಾತನಾಡುತ್ತಿದ್ದರು. ಈ ನಿಲುವಿನಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂಬುದು ಗಮನಾರ್ಹ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.