ನವದೆಹಲಿ: ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಕೊನೆಗೂ ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖಸ್ಥರ ನೇಮಕಕ್ಕೆ ಮುಂದಾಗಿದೆ.
ಲೋಕಪಾಲ ಸಂಸ್ಥೆಯ ಮುಖಸ್ಥರು ಮತ್ತು ಎಂಟು ಸದಸ್ಯರ ನೇಮಕಾತಿಗೆ ಶೋಧ ಸಮಿತಿ ಬುಧವಾರ ಅರ್ಜಿ ಆಹ್ವಾನಿಸಿದೆ.
ಶೋಧ ಸಮಿತಿಯ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಈ ಸಂಬಂಧ ಜಾಹೀರಾತು ನೀಡಿದ್ದು, ಅರ್ಜಿ ಸಲ್ಲಿಸಲು ಫೆ.22 ಕೊನೆಯ ದಿನವಾಗಿದೆ.
ಲೋಕಪಾಲ ಸಂಸ್ಥೆಗೆ ಮುಖ್ಯಸ್ಥರ ನೇಮಕದಲ್ಲಿ ಆಗುತ್ತಿರುವ ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಫೆಬ್ರುವರಿ ತಿಂಗಳ ಅಂತ್ಯದ ಒಳಗಾಗಿ ಲೋಕಪಾಲ ಹುದ್ದೆ ಭರ್ತಿಗೆ ಅರ್ಹರ ಹೆಸರು ಸೂಚಿಸುವಂತೆ ಶೋಧ ಸಮಿತಿಗೆ ಸೂಚನೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.