ADVERTISEMENT

ಲಖನೌದಲ್ಲಿ ವಕೀಲನ ಹತ್ಯೆ; ಮೃತದೇಹವನ್ನು ನ್ಯಾಯಾಲಯದಲ್ಲಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 13:11 IST
Last Updated 8 ಜನವರಿ 2020, 13:11 IST
ನ್ಯಾಯಾಲಯದಲ್ಲಿ ಮೃತದೇಹವನ್ನಿಟ್ಟು ಪ್ರತಿಭಟಿಸುತ್ತಿರುವ ವಕೀಲರು (ಕೃಪೆ: ಟ್ವಿಟರ್)
ನ್ಯಾಯಾಲಯದಲ್ಲಿ ಮೃತದೇಹವನ್ನಿಟ್ಟು ಪ್ರತಿಭಟಿಸುತ್ತಿರುವ ವಕೀಲರು (ಕೃಪೆ: ಟ್ವಿಟರ್)   

ಲಖನೌ: ಮಂಗಳವಾರ ರಾತ್ರಿ ಲಖನೌದಲ್ಲಿ ಶಿಶಿರ್ ತ್ರಿಪಾಠಿ ಎಂಬ ನ್ಯಾಯವಾದಿಯಹತ್ಯೆ ನಡೆದಿದ್ದನ್ನು ಖಂಡಿಸಿ ಬುಧವಾರ ಅಲ್ಲಿನವಕೀಲರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ತಮ್ಮ ಸಹೋದ್ಯೋಗಿಯ ಹತ್ಯೆ ಖಂಡಿಸಿದ ವಕೀಲರು ಮೃತದೇಹವನ್ನು ಜಿಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯದೊಳಗೆ ಒಯ್ದು ಪ್ರತಿಭಟನೆ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆದಿದ್ದು ಆಮೇಲೆ ಪೊಲೀಸರು ಮಧ್ಯಪ್ರವೇಶಿಸಿ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕಾಗಿ ಕುಟುಂಬದವರಿಗೆ ಒಪ್ಪಿಸಿದ್ದಾರೆ.

ಪ್ರತಿಭಟನೆ ನಡೆಸಿ ಬೀದಿಗಳಿದ ವಕೀಲರು ಪೊಲೀಸರ ವಿರುದ್ಧಘೋಷಣೆ ಕೂಗಿದ್ದುಜಿಲ್ಲಾ ಮೆಜಿಸ್ಟ್ರೇಟ್ ಬಳಿ ರಸ್ತೆ ಬಂದ್ ಮಾಡಿದ್ದಾರೆ.

ADVERTISEMENT

32ರ ಹರೆಯದ ಶಿಶಿರ್ ತ್ರಿಪಾಠಿಮನೆ ಬಳಿ ಬಂದ ಐವರು ದುಷ್ಕರ್ಮಿಗಳು ಕಲ್ಲು ಮತ್ತು ಬೆತ್ತದಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಓರ್ವನನ್ನುಬಂಧಿಸಿದ್ದು, ಇನ್ನು ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಲಖನೌ ಪೊಲೀಸರು ಹೇಳಿದ್ದಾರೆ. ಬಂಧಿತ ಆರೋಪಿ ಕೂಡಾನ್ಯಾಯವಾದಿ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇಬ್ಬರು ನ್ಯಾಯವಾದಿಗಳ ನಡುವೆ ಆಸ್ತಿ ವಿಷಯದಲ್ಲಿನ ತರ್ಕವೇ ಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಮನೆಯ ಪರಿಸರದಲ್ಲಿ ನಡೆಯುತ್ತಿದ್ದಅಕ್ರಮ ಚಟುವಟಿಕೆಗಳ ಬಗ್ಗೆ ದನಿಯೆತ್ತಿದ್ದಕ್ಕೆ ತ್ರಿಪಾಠಿ ಹತ್ಯೆ ನಡೆದಿದೆ ಎಂದು ಆತನ ಕುಟುಂಬದವರು ಹೇಳಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿಅಲ್ಲಿನ ಪೊಲೀಸ್ ಠಾಣೆ ಉಸ್ತುವಾರಿ ವಹಿಸಿದ್ದ ಪೊಲೀಸ್ ಅಧಿಕಾರಿಯನ್ನು ನಗರದ ಪೊಲೀಸ್ ವರಿಷ್ಠಾಧಿಕಾರಿ ವಜಾ ಮಾಡಿದ್ದಾರೆ.

ಗಾಂಜಾ ವ್ಯಾಪಾರ ಮಾಡುತ್ತಿದ್ದವ್ಯಕ್ತಿಯೊಂದಿಗೆ ತ್ರಿಪಾಠಿಗೆ ದ್ವೇಷವಿತ್ತು. ಈ ಬಗ್ಗೆ ತ್ರಿಪಾಠಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತ್ರಿಪಾಠಿಯಸಹೋದರ ಶರದ್ ತ್ರಿಪಾಠಿ ಹೇಳಿದ್ದಾರೆ.

ಈ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟಿಸಿದ್ದು, ಈ ರಾಜ್ಯ ಅಪರಾಧಿಗಳ ಮುಷ್ಠಿಯಲ್ಲಿದೆಯೇ ? ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ.

ಮಂಗಳವಾರ ರಾತ್ರಿ 11.30ರ ವೇಳೆಗೆ ಈ ಘಟನೆ ನಡೆದಿತ್ತು. ನಾವು ಸುಮಾರು 45 ಪ್ರದೇಶಗಳಲ್ಲಿ ಹುಡುಕಾಟ ನಡೆಸಿ ಪ್ರಮುಖ ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ. ಇನ್ನಿತರ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚುತ್ತೇವೆ. ಇಲ್ಲಿ ಸಿಕ್ಕಾಪಟ್ಟೆ ಪ್ರತಿಭಟನೆಗಳು ನಡೆಯುತ್ತಿದ್ದರೂ, ಅಂತಿಮ ಸಂಸ್ಕಾರ ನಡೆಸುವಂತೆ ನಾವು ಕುಟುಂಬದವರಿಗೆ ಹೇಳಿದ್ದೆವು ಎಂದು ಲಖನೌದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.