ಮಹಾಕುಂಭ ಮೇಳ
ಭದೋಹಿ: ಮಹಾಕುಂಭ ಮೇಳದ ವೇಳೆ ಪ್ರಯಾಗರಾಜ್ನ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಪಾಪ ಕಳೆದುಕೊಳ್ಳಲು ಬಂದಿದ್ದ ಅಕ್ರಮ ಮದ್ಯ ಕಳ್ಳಸಾಗಣೆದಾರ ಪ್ರವೇಶ್ ಯಾದವ್ (22) ಎಂಬಾತನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಈತ, 2023ರ ಜುಲೈನಿಂದ ಪೊಲೀಸರ ಕೈಗೆ ಸಿಗದೆ ನಾಪತ್ತೆಯಾಗಿದ್ದ.
'ಪ್ರವೇಶ್ ರಾಜಸ್ಥಾನದ ಅಲ್ವಾರ್ ನಿವಾಸಿಯಾಗಿದ್ದು, ಒಂದೂವರೆಗೆ ವರ್ಷದಿಂದ ತಲೆಮರೆಸಿಕೊಂಡಿದ್ದ' ಎಂದು ಭದೋಹಿ ಪೊಲೀಸ್ ವರಿಷ್ಠಾಧಿಕಾರಿ ಅಭಿಮನ್ಯು ಮಾಂಗ್ಲಿಕ್ ತಿಳಿಸಿದ್ದಾರೆ.
'2023ರ ಜುಲೈ 29ರಂದು ರಾಷ್ಟ್ರೀಯ ಹೆದ್ದಾರಿ–19ರಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ದುಷ್ಕರ್ಮಿಗಳು ಬಿಹಾರಕ್ಕೆ ಸಾಗಿಸಲು ಉದ್ದೇಶಿಸಿದ್ದ ಅಕ್ರಮ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರದೀಪ್ ಯಾದವ್ ಹಾಗೂ ರಾಜ್ ದೊಮೊಲಿಯಾ ಎಂಬವರನ್ನು ಭದೋಹಿಯ ಉಂಜ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು. ಆದರೆ, ಪ್ರವೇಶ್ ಯಾದವ್ ಸ್ಥಳದಿಂದ ಪರಾರಿಯಾಗಿದ್ದ. ಬಹು ಸಮಯದಿಂದ ಬಿಹಾರದಲ್ಲಿ ಅಕ್ರಮ ಮದ್ಯ ಸಾಗಣೆಯಲ್ಲಿ ತೊಡಗಿಕೊಂಡಿದ್ದ ಈ ಮೂವರೂ ಅಲ್ವಾರ್ ನಿವಾಸಿಗಳೇ' ಎಂದು ವಿವರಿಸಿದ್ದಾರೆ.
ಪ್ರವೇಶ್, ಪವಿತ್ರ ಸ್ನಾನ ಮಾಡುವ ಸಲುವಾಗಿ ಪ್ರಯಾಗರಾಜ್ಗೆ ಬಂದಿದ್ದ. ಆದರೆ, ಪರಿಣಾಮಕಾರಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದ್ದರಿಂದ ಸಿಕ್ಕಿ ಬಿದ್ದಿದ್ದಾನೆ ಎಂದು ಪ್ರತಿಪಾದಿಸಿದ್ದಾರೆ.
ಬಂಧಿತರ ವಿರುದ್ಧ ಐಪಿಸಿ, ಅಬಕಾರಿ ಕಾಯಿದೆ ಮತ್ತು ಗ್ಯಾಂಗ್ಸ್ಟರ್ ಆ್ಯಕ್ಟ್ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.